ಹೋರಾಟಗಾರ್ತಿ ಮೇಧಾ ಪಾಟ್ಕರ್ ವಿರುದ್ಧ ಮಾನನಷ್ಟ ಆರೋಪ ರಚನೆ
ಹೊಸದಿಲ್ಲಿ, ಜು. 9: ಖಾದಿ ಗ್ರಾಮ ಹಾಗೂ ಕೈಗಾರಿಕೆ ಆಯೋಗದ ಅಧ್ಯಕ್ಷ ವಿ.ಕೆ. ಸಕ್ಸೇನಾ ವಿರುದ್ಧ ಪ್ರಕರಣ ದಾಖಲಿಸಿದ ನರ್ಮದಾ ಬಚಾವೋ ಆಂದೋಲನದ ಹೋರಾಟಗಾರ್ತಿ ಮೇಧಾ ಪಾಟ್ಕರ್ ವಿರುದ್ಧ ದಿಲ್ಲಿ ನ್ಯಾಯಾಲಯ ಮಾನನಷ್ಟ ಆರೋಪ ರೂಪಿಸಿದೆ.
2006ರಲ್ಲಿ ಟಿವಿ ಸುದ್ದಿ ವಾಹಿನಿಯಲ್ಲಿ ಮಾನ ಹಾನಿ ನಡೆಸಿದ್ದಾರೆ ಎಂದು ಸಕ್ಸೇನಾ ದೂರಿನಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮೆಟ್ರೋಪಾಲಿಟಿನ್ ದಂಡಾಧಿಕಾರಿ ನಿಶಾಂತ್ ಗರ್ಗ್ ಅವರು ನೋಟೀಸ್ ರೂಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಐಪಿಸಿಯ 499/500 ಕಲಂ ಅಡಿಯಲ್ಲಿ ಮೇಧಾ ಪಾಟ್ಕರ್ ವಿರುದ್ಧ ನ್ಯಾಯಾಲಯ ನೋಟಿಸ್ ರೂಪಿಸಿದೆ. ಆಗಸ್ಟ್ 28ರಂದು ಸಕ್ಸೇನಾ ಅವರ ಹೇಳಿಕೆ ದಾಖಲಿಸಿಕೊಳ್ಳಲು ನ್ಯಾಯಾಲಯ ದಿನ ನಿಗದಿಪಡಿಸಿದೆ.
ತನ್ನ ಹಾಗೂ ನರ್ಮದಾ ಬಚಾವೋ ಆಂದೋಲನದ ವಿರುದ್ಧ ಜಾಹೀರಾತು ಪ್ರಕಟಿಸಿದ ವಿರುದ್ಧ ಮೇಧಾ ಪಾಟ್ಕರ್ ಪ್ರಕರಣ ದಾಖಲಿಸಿದ್ದರು. 2000ರ ಬಳಿಕ ಪಾಟ್ಕರ್ ಹಾಗೂ ಸಕ್ಸೇನಾ ಅವರ ನಡುವೆ ಕಾನೂನು ಯುದ್ಧ ಆರಂಭವಾಗಿತ್ತು. ಸಕ್ಸೇನಾ ಅವರು ಆಗ ಅಹ್ಮದಾಬಾದ್ ಮೂಲದ ಸರಕಾರೇತರ ಸಂಸ್ಥೆ ‘ನ್ಯಾಶನಲ್ ಕೌನ್ಸಿಲ್ ಫಾರ್ ಸಿವಿಲ್ ಲಿಬರ್ಟಿ’ಯ ಮುಖ್ಯಸ್ಥರಾಗಿದ್ದರು. ಪಾಟ್ಕರ್ ಪ್ರಕರಣ ದಾಖಲಿಸಿರುವುದಕ್ಕೆ ಪ್ರತಿಯಾಗಿ ಸಕ್ಸೇನಾ, ಟಿ.ವಿ. ವಾಹಿನಿಯಲ್ಲಿ ಹಾಗೂ ಪತ್ರಿಕಾ ಹೇಳಿಕೆ ನೀಡಿ ಮಾನ ಹಾನಿ ನಡೆಸಿದ್ದಾರೆ ಎಂದು ಆರೋಪಿಸಿ ಪಾಟ್ಕರ್ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದ್ದರು.