ಗ್ಯಾಂಗ್ ರೇಪ್ ಬಳಿಕ ದೇವಾಲಯದಲ್ಲಿ ಮಹಿಳೆಯ ಸಜೀವ ದಹನ
ಬರೇಲಿ, ಜು.15: ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ಬರ್ಬರ ಕೃತ್ಯಗಳ ಸರಣಿ ಮುಂದುವರಿದಿದ್ದು, ಮಹಿಳೆಯೊಬ್ಬರನ್ನು ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ದೇವಾಲಯದ ಯಜ್ಞಶಾಲೆ ಬಳಿ ಜೀವಂತವಾಗಿ ದಹಿಸಿದ ಪೈಶಾಚಿಕ ಘಟನೆ ವರದಿಯಾಗಿದೆ.
ಸಂಭಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, 35 ವರ್ಷದ ಮಹಿಳೆ ಸಂತ್ರಸ್ತೆ. ಬೆಂಕಿ ದಾಳಿಗೊಳಗಾಗುವ ಮುನ್ನ ಮಹಿಳೆ ನೆರವಿಗಾಗಿ ಪೊಲೀಸ್ ಸಹಾಯವಾಣಿ ಸಂಖ್ಯೆ 100ಕ್ಕೆ ಕರೆ ಮಾಡಿದ್ದರೂ, ಕರೆಗೆ ಉತ್ತರಿಸಲಿಲ್ಲ ಎಂದು ಮಹಿಳೆಯ ಪತಿ ದೂರಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ.
ರಾಜಾಪುರ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಶನಿವಾರ ಮುಂಜಾನೆ ಈ ಘಟನೆ ನಡೆದಿದೆ. ಮಹಿಳೆಗೆ ಇಬ್ಬರು ಮಕ್ಕಳಿದ್ದು, ಪತಿ ಗಾಝಿಯಾಬಾದ್ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ.
ಮನೆಯಲ್ಲಿ ನಿದ್ರಿಸುತ್ತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿ, ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಐವರ ವಿರುದ್ಧ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ದಾಖಲಿಸಲಾಗಿದ್ದು, ಶನಿವಾರ ಮುಂಜಾನೆ 2:30ರ ವೇಳೆಗೆ ಘಟನೆ ನಡೆದಿದೆ. ಮಹಿಳೆ ತನ್ನ ಸೋದರ ಸಂಬಂಧಿಗೆ ಕೊನೆಯ ಕರೆ ಮಾಡಿ, ಪೊಲೀಸರಿಗೆ ಮಾಹಿತಿ ನೀಡಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ ಎಂದು ಅಸಹಾಯಕತೆ ತೋಡಿಕೊಂಡಿರುವ ಆಡಿಯೊ ಕ್ಲಿಪ್ "ಟೈಮ್ಸ್ ಆಫ್ ಇಂಡಿಯಾ"ಗೆ ಲಭ್ಯವಾಗಿದೆ.
"ರಾತ್ರಿ 2:30ರ ವೇಳೆಗೆ ಮನೆಗೆ ನುಗ್ಗಿದ ಆರೋಪಿಗಳು ಒಬ್ಬೊಬ್ಬರಾಗಿ ಪತ್ನಿ ಮೇಲೆ ಅತ್ಯಾಚಾರ ಎಸಗಿದ್ದಾರೆ. ಜೋರಾಗಿ ಮಳೆ ಸುರಿಯುತ್ತಿದ್ದಾಗ ಕೇವಲ ಚಿಮಣಿಎಣ್ಣೆ ದೀಪ ಮಾತ್ರ ಕೋಣೆಯಲ್ಲಿ ಉರಿಯುತ್ತಿತ್ತು. ನನ್ನ ಮೊಬೈಲ್ ಫೊನ್ ಹಾಗೂ ತನ್ನ ಸಹೋದರನ ಮೊಬೈಲ್ಗೆ ಕರೆ ಮಾಡಲು ಯತ್ನಿಸಿ ಸಾಧ್ಯವಾಗದಿದ್ದಾಗ, ಸೋದರ ಸಂಬಂಧಿಗೆ ಕರೆ ಮಾಡಿ ಘಟನೆಯನ್ನು ವಿವರಿಸಿದ್ದಳು. ಸಂಬಂಧಿಕರು ಪೊಲೀಸರಿಗೆ ವಿಷಯ ತಿಳಿಸುವ ಮುನ್ನ ಆರೋಪಿಗಳು ಪತ್ನಿಯನ್ನು ಪಕ್ಕದ ದೇವಾಲಯಕ್ಕೆ ಎಳೆದೊಯ್ದು ಯಜ್ಞ ಶಾಲೆ ಬಳಿ ದಹಿಸಿದ್ದಾರೆ" ಎಂದು ಪತಿ ಪೊಲೀಸ್ ಹೇಳಿಕೆ ನೀಡಿದ್ದಾರೆ.