ಗುಂಪನ್ನು ಮುನ್ನಡೆಸಿದ ಆರೋಪ: ಬಿಜೆಪಿ ನಾಯಕಿ ವಿರುದ್ಧ ಪ್ರಕರಣ ದಾಖಲು
ಮಕ್ಕಳ ಕಳ್ಳಿ ಎಂದು ಮಾನಸಿಕ ಅಸ್ವಸ್ಥೆಗೆ ಥಳಿಸಿದ ಪ್ರಕರಣ
ಸಿಲಿಗುರಿ, ಜು.17: ಮಕ್ಕಳ ಕಳ್ಳಿ ಎಂಬ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ಮಹಿಳೆಯನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ದಾಳಿ ನಡೆಸಿದ ಗುಂಪನ್ನು ಮುನ್ನಡೆಸಿದ ಆರೋಪದಲ್ಲಿ ಬಿಜೆಪಿ ನಾಯಕಿಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ಉತ್ತರ ಬಂಗಾಳದ ಜಲ್ಪೈಗುರಿಯಲ್ಲಿ ಈ ಘಟನೆ ನಡೆದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಜಲ್ಪೈಗುರಿ ಜಿಲ್ಲೆಯ ಬಿಜೆಪಿ ಮಹಿಳಾ ಮೋರ್ಛಾದ ಉಪಾಧ್ಯಕ್ಷ ತಾರಾಮಣಿ ರಾಯ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
"ಐಪಿಸಿ ಸೆಕ್ಷನ್ 143, 323, 325, 341 ಹಾಗು 304/511ರಡಿ ತಾರಾಮಣಿ ರಾಯ್ ವಿರುದ್ಧ ಪ್ರಕರಣ ದಾಖಲಾಗಿದೆ" ಎಂದು ಜಲ್ಪೈಗುರಿ ಜಿಲ್ಲಾ ಎಸ್ಪಿ ಅಮಿತಾಭಾ ಮೈತಿ ಮಾಹಿತಿ ನೀಡಿದ್ದಾರೆ. ರಾಯ್ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಸಂಜೆ ಮಾನಸಿಕ ಅಸ್ವಸ್ಥೆ ಸುನೀತಾ ಬಕ್ಷಿಯನ್ನು ಸುತ್ತುವರಿದ ಕದಮ್ತಲ ಗ್ರಾಮಸ್ಥರು 'ಗ್ರಾಮದಲ್ಲಿ ಸುತ್ತುತ್ತಿರುವುದೇಕೆ?" ಎಂದು ಪ್ರಶ್ನಿಸಿದ್ದರು. ಆಕೆಯ ಉತ್ತರದಿಂದ ತೃಪ್ತರಾಗದ ಗ್ರಾಮಸ್ಥರು ಆಕೆಯನ್ನು ಮಕ್ಕಳ ಕಳ್ಳಿ ಎಂದು ಶಂಕಿಸಿ ಥಳಿಸಿದ್ದರು.