ಮಹಾರಾಷ್ಟ್ರ: ತೀವ್ರಗೊಂಡ ಡೇರಿ ರೈತರ ಮುಷ್ಕರ; ಇಂದಿನಿಂದ ಹಾಲಿನ ಪೂರೈಕೆಯಲ್ಲಿ ಅಡಚಣೆ
ಮುಂಬೈ, ಜು. 19: ಡೇರಿ ರೈತರ ಮುಷ್ಕರ ನಾಲ್ಕನೇ ದಿನಕ್ಕೆ ಕಾಲಿಡುತ್ತಿರುವಂತೆ ಹಾಗೂ ಚಳವಳಿ ತೀವ್ರಗೊಳ್ಳುತ್ತಿರುವಂತೆ ಮಹಾರಾಷ್ಟ್ರ ಸರಕಾರ ಚಳವಳಿಯ ನೇತೃತ್ವ ವಹಿಸಿರುವ ರೈತ ಸಂಘಟನೆ ಸ್ವಾಭಿಮಾನಿ ಶೇಟ್ಕಾರಿ ಸಂಘಟನೆ (ಎಸ್ಎಸ್ಎಸ್)ಯೊಂದಿಗೆ ಮಾತುಕತೆ ಆರಂಭಿಸಿದೆ.
ಮುಷ್ಕರದಿಂದಾಗಿ ಹಾಲಿನ ಡೇರಿಗಳು ಹಾಲು ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಮುಂಬೈ ಸೇರಿದಂತೆ ಮಹಾರಾಷ್ಟ್ರದ ದೊಡ್ಡ ನಗರಗಳಿಗೆ ಹಾಲು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ನಗರಕ್ಕೆ ಕೇವಲ ಶೇ. 20ಕ್ಕಿಂತ ಕಡಿಮೆ ಹಾಲು ಸಿಗುತ್ತದೆ. ಡೇರಿಗಳಲ್ಲಿ ಹಾಲು ದಾಸ್ತಾನು ಇದ್ದುದರಿಂದ ಗುರುವಾರದ ವರೆಗೆ ಹಾಲು ಪೂರೈಕೆಯಲ್ಲಿ ಯಾವುದೇ ತೊಂದರೆ ಉಂಟಾಗಲಾರದು. ಆದರೆ, ಶುಕ್ರವಾರದಿಂದ ಪರಿಸ್ಥಿತಿ ಶೋಚನೀಯವಾಗಿದೆ ಎಂದು ಸರಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಮುಂ
ಬೈಯಲ್ಲಿ ಬುಧವಾರ ನಡೆಸಲಾದ ಎಸ್ಎಸ್ಎಸ್ ನಾಯಕ ರಾಜು ಸೆಟ್ಟಿ ಹಾಗೂ ರಾಜ್ಯ ನೀರಾವರಿ ಸಚಿವ ಗಿರೀಶ್ ಮಹಾಜನ್ ಅವರ ನಡುವಿನ ಮಾತುಕತೆ ಸಂದರ್ಭ ರಾಜು ಸೆಟ್ಟಿ ಅವರು ಸರಕಾರದ ಮುಂದೆ ಎರಡು ಪ್ರಸ್ತಾಪಗಳನ್ನು ಇರಿಸಿದ್ದಾರೆ. ಪ್ರತಿ ಲೀಟರ್ ಹಾಲಿಗೆ ಡೇರಿ ರೈತರಿಗೆ 5 ರೂ. ನೇರ ಸಬ್ಸಿಡಿ ನೀಡಿ ಅಥವಾ ಪ್ರತಿ ಲೀಟರ್ ಹಾಲಿಗೆ ರೂ. 25 ರೈತರಿಗೆ ನೀಡುವುದಾಗಿ ಭರವಸೆ ನೀಡಿ ಎಂಬುದು ಸೆಟ್ಟಿ ಅವರ ಪ್ರಸ್ತಾಪ. ಪ್ರತಿ ಕೆ.ಜಿ. ಕೆನೆ ತೆಗೆದ ಹಾಲಿನ ಹುಡಿಯ ರಫ್ತು ಉತ್ತೇಜಕ ಸಬ್ಸಿಡಿಯನ್ನು ಏರಿಕೆ ಮಾಡಲಾಗುವುದು. ಇದರಿಂದ ಡೇರಿಗಳಿಗೆ ನೆರವಾಗಲಿದೆ ಎಂದು ಸರಕಾರ ಹೇಳಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.