ಕಣ್ಣಲ್ಲಿ ಕಣ್ಣಿಟ್ಟು ನೋಡಲು ಮೋದಿಗೆ ಧೈರ್ಯವಿಲ್ಲ: ರಾಹುಲ್ ಗಾಂಧಿ
ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಚರ್ಚೆ
ಹೊಸದಿಲ್ಲಿ, ಜು.20:ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಚರ್ಚೆ ವೇಳೆ ರಾಹುಲ್ ಗಾಂಧಿ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿ ಬಳಿಕ ಪ್ರಧಾನಿ ಬಳಿ ತೆರಳಿ ಅವರನ್ನು ಆಲಂಗಿಸಿಕೊಂಡರು.
ತನ್ನನ್ನು ಆಲಂಗಿಸುತ್ತಿದ್ದಂತೆ ಪ್ರಧಾನಿ ಮೋದಿ ಅವರು ರಾಹುಲ್ ಬೆನ್ನು ತಟ್ಟಿದರು.
" ನಾನು ನಿಮಗೆ ಪಪ್ಪು ಇರಬಹುದು. ಆದರೆ ಕಾಂಗ್ರೆಸ್ ಪಕ್ಷ ದೇಶ ಕಟ್ಟಿದೆ. ಈ ಭಾವನೆ ನಿಮ್ಮಲ್ಲಿಯೂ ಇದೆ. ನಾನು ಬಿಜೆಪಿ, ಆರ್ ಎಸ್ ಎಸ್ ಗೆ ಅಭಾರಿಯಾಗಿದ್ದೇನೆ. ನಿಮ್ಮಲ್ಲಿನ ಭಾವನೆ ಹೊರತರುವೆ. ನಿಮ್ಮನ್ನೂ ಕಾಂಗ್ರೆಸ್ ಗರನ್ನಾಗಿ ಮಾಡುವೆ" ಎಂದು ರಾಹುಲ್ ಭಾಷಣದಲ್ಲಿ ಹೇಳಿದರು.
"ನಾವು ಎಲ್ಲರೂ ಸೇರಿ ಪ್ರಧಾನಿ ಮೋದಿಯನ್ನು ಸೋಲಿಸಲು ಹೋಗುತ್ತಿದ್ದೇವೆ . ನಮಗೆ ಅಧಿಕಾರ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಮೋದಿ, ಶಾಗೆ ಅಧಿಕಾರ ಇಲ್ಲದಿದ್ದರೆ ಆಗಲ್ಲ. ಇವರಿಬ್ಬರು ವಿಭಿನ್ನ ರಾಜಕಾರಣಿಗಳು" ಎಂದರು ರಾಹುಲ್ .
ರೈತರು ಸಾಲ ಮನ್ನಾಕ್ಕೆ ಕೈ ಮುಗಿದು ಕೇಳುತ್ತಿದ್ದಾರೆ. ಆದರೆ ವಿತ್ತ ಮಂತ್ರಿ ಸಾಲ ಮನ್ನಾಮಾಡುವುದಿಲ್ಲ ಎಂದು ಹೇಳುತ್ತಿದ್ದಾರೆ. ಕಣ್ಣಲ್ಲಿ ಕಣ್ಣಿಟ್ಟು ನೋಡಲು ಮೋದಿಗೆ ಧೈರ್ಯ ಇಲ್ಲ. ಮೋದಿ 20 ಮಂದಿ ಉದ್ಯಮಿಗಳ ಸಾಲ ಮನ್ನಾ ಮಾಡಿದ್ದಾರೆ. ಅವರ 2.5 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ.
ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಜಾಸ್ತಿಯಾಗಿದೆ. ಬಡವರ ಬಗ್ಗೆ ಪ್ರಧಾನಿ ಹೃದಯದಲ್ಲಿ ಸ್ಥಾನವಿಲ್ಲ. ಸಣ್ಣ ಉದ್ಯಮಿಗಳ ಬಗ್ಗೆ ಮೋದಿ ಮಾತನಾಡುವುದಿಲ್ಲ. ರಾಫೆಲ್ ಒಪ್ಪಂದದ ವಿಚಾರದಲ್ಲಿ ಪ್ರಧಾನಿ ಒತ್ತಡದಿಂದ ರಕ್ಷಣಾ ಸಚಿವರು ಸುಳ್ಳು ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.