ನನ್ನ ಮಗ ಗೋಕಳ್ಳನಾಗಿರಲಿಲ್ಲ, ಪಾಲಕನಾಗಿದ್ದ: ಮೃತ ಅಕ್ಬರ್ ಖಾನ್ ತಂದೆ
ಗೋರಕ್ಷಣೆ ನೆಪದಲ್ಲಿ ಥಳಿಸಿ ಹತ್ಯೆಗೈದ ಪ್ರಕರಣ
ಆಲ್ವಾರ್, ಜು.21: ನನ್ನ ಮಗ ಗೋಕಳ್ಳನಾಗಿರಲಿಲ್ಲ ಬದಲಿಗೆ ಗೋಪಾಲಕನಾಗಿದ್ದ ಎಂದು ಆಲ್ವಾರ್ನಲ್ಲಿ ಶುಕ್ರವಾರ ರಾತ್ರಿ ಗುಂಪುಹತ್ಯೆಗೊಳಗಾದ ಅಕ್ಬರ್ ಖಾನ್ ತಂದೆ ಸುಲೈಮಾನ್ ಖಾನ್ ತಿಳಿಸಿದ್ದಾರೆ.
“ನನ್ನ ಮಗ ಸಾವನ್ನಪ್ಪಿದ್ದಾನೆ ಎಂದು ಊಹಿಸಲೂ ನನ್ನಿಂದ ಸಾಧ್ಯವಾಗುತ್ತಿಲ್ಲ. ಗುರುವಾರ ಬೆಳಿಗ್ಗೆ 9 ಗಂಟೆಗೆ ಆತ ತನ್ನ ಗೆಳೆಯ ಅಸ್ಲಾಂ ಜೊತೆ ಸಮೀಪದ ಗ್ರಾಮಕ್ಕೆ ದನ ಮೇಯಿಸಲು ತೆರಳಿದ್ದ. ಆತನಿಗಾಗಿ ನಾವು ಮನೆಯಲ್ಲಿ ಕಾಯುತ್ತಿದ್ದೆವು ಆದರೆ ಆತ ಬರಲೇ ಇಲ್ಲ. ಮರುದಿನ ಬೆಳಿಗ್ಗೆ ರಾಮಗಡ ಪೊಲೀಸರು ಮಾಹಿತಿ ನೀಡಿದ ನಂತರವಷ್ಟೇ ನಮಗೆ ಆತನ ಸಾವಿನ ಬಗ್ಗೆ ತಿಳಿದಿದೆ” ಎಂದು ಸುಲೈಮಾನ್ ಖಾನ್ ತಿಳಿಸಿದ್ದಾರೆ.
“ನನ್ನ ಮಗ ಗೋಕಳ್ಳನಾಗಿದ್ದರೆ ಘಟನೆ ನಡೆದ ಸ್ಥಳದಲ್ಲಿ ಪೊಲೀಸರಿಗೆ ಲಾರಿ ಅಥವಾ ಟ್ರಕ್ ಸಿಗುತ್ತಿತ್ತು. ಆತನ ಮೃತದೇಹದ ಪಕ್ಕದಲ್ಲಿ ಎರಡು ದನಗಳು ಪತ್ತೆಯಾದ ಮಾತ್ರಕ್ಕೆ ಆತ ಗೋಕಳ್ಳ ಎಂದು ಹೇಳಲು ಸಾಧ್ಯವಿಲ್ಲ” ಎಂದು ಖಾನ್ ತಿಳಿಸಿದ್ದಾರೆ. ತನ್ನ ಮಗನ ಸಾವಿಗೆ ಕಾರಣರಾದ ಎಲ್ಲರನ್ನೂ ಬಂಧಿಸಿ ಅವರನ್ನು ಕಠಿಣ ಶಿಶಿಕ್ಷೆಗೆ ಗುರಿಪಡಿಸಬೇಕೆಂದು ಸುಲೈಮಾನ್ ಖಾನ್ ಮನವಿ ಮಾಡಿದ್ದಾರೆ.