ತಮಿಳುನಾಡು: ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ಐವರು
ಮೆಟ್ಟೂರ್ ಡ್ಯಾಮ್ ನಿಂದ ಹೆಚ್ಚುವರಿ ನೀರು ಬಿಡುಗಡೆ
ಚೆನ್ನೈ, ಜು.22: ಮೆಟ್ಟೂರ್ ಡ್ಯಾಮ್ ನಿಂದ ಹೆಚ್ಚುವರಿ ನೀರು ಬಿಡುಗಡೆ ಮಾಡಿದ ಪರಿಣಾಮ ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಕಾವೇರಿ ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮೂವರು ಮಹಿಳೆಯರು ಸೇರಿ ಐವರು ಕೊಚ್ಚಿಕೊಂಡು ಹೋಗಿರುವ ಬಗ್ಗೆ ವರದಿಯಾಗಿದೆ.
"ಮೆಟ್ಟೂರು ಡ್ಯಾಮ್ ನಿಂದ ಮೂರು ಕಿ.ಮೀ. ದೂರದಲ್ಲಿರುವ ರೆಡ್ಡಿಯಾರ್ಪಾಳಯಂನಲ್ಲಿ ಕಾವೇರಿ ನದಿಯಲ್ಲಿ ಆರು ಮಂದಿ ಸ್ನಾನ ಮಾಡುತ್ತಿದ್ದರು. 7 ವರ್ಷದ ಬಾಲಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋದ. ಇತರ ಐದು ಮಂದಿ ಆತನ ರಕ್ಷಣೆಗೆ ಧಾವಿಸಿದ್ದು, ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ" ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಜಿ.ವೈಷ್ಣವಿ (20), ಎನ್.ಸರವಣನ್ (35), ಎಸ್. ಮೈಥಿಲಿ (32), ಎಸ್.ರವೀನಾ (17) ಹಾಗು ಎಸ್. ಹರಿಹರನ್
(7) ಎಂಬವರು ಮೃತಪಟ್ಟಿದ್ದಾರೆ. 18 ವರ್ಷದ ಧನುಶ್ರೀಯನ್ನು ರಕ್ಷಿಸಲಾಗಿದೆ. ನಾಲ್ವರ ಮೃತದೇಹ ಈಗಾಗಲೇ ಪತ್ತೆಯಾಗಿದೆ.
ಹೆಚ್ಚುವರಿ ನೀರು ಬಿಡುಗಡೆಯ ಹಿನ್ನೆಲೆಯಲ್ಲಿ ದೂರದರ್ಶನ, ಲೌಡ್ ಸ್ಪೀಕರ್, ನೋಟಿಸ್ ಗಳ ಮೂಲಕ ಎಚ್ಚರಿಕೆ ನೀಡಲಾಗಿತ್ತು.