ಜಂತರ್ ಮಂತರ್ ನ ಹೊರಗೆ ಶಾಂತಿಯುತ ಪ್ರತಿಭಟನೆಗೆ ಸುಪ್ರೀಂ ಅಸ್ತು
ಹೊಸದಿಲ್ಲಿ, ಜು.23: ರಾಜಧಾನಿಯ ಐಕಾನಿಕ್ ಜಂತರ್ ಮಂತರ್ ಸುತ್ತ ಪ್ರತಿಭಟನೆ ನಿಷೇಧದ ಹೊದಿಕೆಯನ್ನು ತೆಗೆದು ಹಾಕಿರುವ ಸುಪ್ರೀಂ ಕೋರ್ಟ್ ಜಂತರ್ ಮಂತರ್ ನ ಹೊರಗಡೆ ಶಾಂತಿಯುತ ಪ್ರತಿಭಟನೆಗೆ ಸೋಮವಾರ ಅನುಮತಿ ನೀಡಿದೆ.
ಪ್ರತಿಭಟನೆಯಿಂದ ಪರಿಸರ ಕಾನೂನು ಉಲ್ಲಂಘನೆಯಾಗುತ್ತಿದೆ ಎಂದು ಕಳೆದ ಅಕ್ಟೋಬರ್ ನಲ್ಲಿ ಪರಿಸರ ಸಂರಕ್ಷಣಾ ಸಂಸ್ಥೆ , ರಾಷ್ಟ್ರೀಯ ಹಸಿರು ಪೀಠವು (ಎನ್ ಜಿಟಿ) ಜಂತರ್ ಮಂತರ್ ಸುತ್ತ ಪ್ರತಿಭಟನೆಗೆ ನಿಷೇಧ ವಿಧಿಸಿತ್ತು.
ಜಂತರ್ ಮಂತರ್ ಬಳಿ ನಡೆಸುವ ಪ್ರತಿಭಟನೆಗೆ ನಿಷೇಧ ಹೇರಿರುವುದನ್ನು ಪ್ರಶ್ನಿಸಿ ಕಳೆದ ಡಿಸೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ಗೆ ಮಜ್ಝೂರ್ ಕಿಸಾನ್ ಸಂಘಟನೆಯು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ನಿಷೇಧ ಹೇರಿರುವುದರಿಂದ ಜನರ ಪ್ರತಿಭಟನೆಯ ಹಕ್ಕನ್ನು ಕಸಿದುಕೊಂಡಂತಾಗಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೇಳಲಾಗಿತ್ತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನಿಷೇಧವನ್ನು ತೆರವುಗೊಳಿಸಿ ಜಂತರ್ ಮಂತರ್ ನಲ್ಲಿ ಶಾಂತಿಯುತ ಪ್ರತಿಭಟನೆಗೆ ಅನುಮತಿ ನೀಡಿದೆ. ಆದರೆ ಈ ಸಂಬಂಧ ಕೆಲವು ನಿಯಮಗಳನ್ನು ರೂಪಿಸುವಂತೆ ದಿಲ್ಲಿ ಪೊಲೀಸರಿಗೆ ಆದೇಶ ನೀಡಿದೆ.