ಅಭಿಮನ್ಯು ಹತ್ಯೆ ಪ್ರಕರಣ: ಕ್ಯಾಂಪಸ್ ಫ್ರಂಟ್ನ ರಾಜ್ಯ ಕಾರ್ಯದರ್ಶಿ ಬಂಧನ
ಕೊಚ್ಚಿ, ಜು. 26: ಎಸ್ಎಫ್ಐ ಕಾರ್ಯಕರ್ತ ಹಾಗೂ ಎರ್ನಾಕುಳಂನ ಮಹಾರಾಜ ಕಾಲೇಜಿನ ವಿದ್ಯಾರ್ಥಿ ಅಭಿಮನ್ಯು ಹತ್ಯೆ ಪ್ರಕರಣದ ಇನ್ನೋರ್ವ ಪ್ರಮುಖ ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಕಣ್ಣೂರಿನ ತಲೆಶ್ಶೇರಿಯ ಮುಹಮ್ಮದ್ ರಿಫಾ ಅವರನ್ನು ಪೊಲೀಸರು ಬೆಂಗಳೂರಿನಿಂದ ಬಂಧಿಸಿದ್ದಾರೆ. ರಿಫಾ ಕೊಚ್ಚಿಯಲ್ಲಿ ಕಾನೂನು ಶಿಕ್ಷಣ ಪಡೆಯುತ್ತಿದ್ದಾರೆ. ಇವರು ಕ್ಯಾಂಪಸ್ ಫ್ರಂಟ್ನ ರಾಜ್ಯ ಕಾರ್ಯದರ್ಶಿ. ಅಭಿಮನ್ಯು ಹತ್ಯೆಗೆ ರಿಫಾ ಸಂಚು ರೂಪಿಸಿದ್ದಾರೆ ಹಾಗೂ ಭಾಗಿಯಾಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಎಸ್ಎಫ್ಐ ಹಾಗೂ ಕ್ಯಾಂಪಸ್ ಫ್ರಂಟ್ಗೆ ಸೇರಿದ ವಿದ್ಯಾರ್ಥಿಗಳ ನಡುವೆ ಘರ್ಷಣೆ ಆರಂಭವಾದಾಗ ಮಹಾರಾಜ ಕಾಲೇಜು ಕ್ಯಾಂಪಸ್ಗೆ ತಲಪುವಂತೆ ತಂಡವೊಂದಕ್ಕೆ ರಿಫಾ ಕರೆ ನೀಡಿದ್ದಾರೆ ಎಂದು ಶಂಕಿಸಲಾಗಿದೆ. ಅಭಿಮನ್ಯುವಿಗೆ ಇರಿದು ಹತ್ಯೆಗೈದ ವ್ಯಕ್ತಿಯ ಬಂಧಿಸುವ ಹಾಗೂ ಆತನ ಪ್ರಸಕ್ತ ಅಡಗುದಾಣ ಸೇರಿದಂತೆ ಇರುವಿಕೆಯ ಬಗ್ಗೆ ತನಿಖಾ ತಂಡಕ್ಕೆ ಮಾಹಿತಿ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಒಟ್ಟು 11 ಮಂದಿಯನ್ನು ಬಂಧಿಸಲಾಗಿದೆ.