ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಅಗ್ನಿವೇಶ್ ಬೆಂಬಲಿಗರಿಂದ ಹಲ್ಲೆ !
ದೂರು ದಾಖಲು
ರಾಂಚಿ,ಜು.27 : ಸಮಾಜ ಸೇವಾ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಅವರ ಬೆಂಬಲಿಗರು ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರ ಮೇಲೆ ಪಾಕೂರ್ ಎಂಬಲ್ಲಿ ಜುಲೈ 17ರಂದು ಹಲ್ಲೆಗೈದಿದ್ದಾರೆಂದು ಆರೋಪಿಸಿ ಜಾರ್ಖಂಡ್ ಬಿಜೆಪಿ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲಾ ಎಲಿಜಬೆತ್ ಹೆಂಬ್ರೊಮ್ ಅಲಿಯಾಸ್ ಶಿಲಾ ರಾಣಿ ಹೆಂಬ್ರೋಮ್ ಎಂಬವರು ಪೊಲೀಸ್ ದೂರು ದಾಖಲಿಸಿದ್ದಾರೆ. ಜುಲೈ 17ರಂದೇ ಅಗ್ನಿವೇಶ್ ಅವರ ಮೇಲೆ ಬಿಜೆಪಿಯ ಯುವ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರ ತಂಡವೊಂದು ನಿಂದಿಸಿ ಹಲ್ಲೆಗೈದ ಘಟನೆ ನಡೆದಿತ್ತು. ಮಹಿಳಾ ಮೋರ್ಚಾ ನಾಯಕಿ ಕೂಡ ಅದೇ ದಿನ ತಮ್ಮ ದೂರು ದಾಖಲಿಸಿದ್ದರೆಂದು ಪೊಲೀಸರು ಹೇಳಿದ್ದಾರೆ.
ಜುಲೈ 17ರಂದು ಅಗ್ನಿವೇಶ್ ತಂಗಿದ್ದ ಪಾಕೂರ್ ಪಟ್ಟಣದ ಹೋಟೆಲ್ ಎದುರು ಸೇರಿದ್ದ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರು ಶಾಂತಿಯುತವಾಗಿ ಕಪ್ಪು ಬಾವುಟ ಪ್ರದರ್ಶಿಸುತ್ತಿದ್ದಾಗ ಬಿಲ್ಲು, ಬಾಣ, ಲಾಠಿ ಮತ್ತಿತರ ಶಸ್ತ್ರಗಳನ್ನು ಹಿಡಿದಿದ್ದ ಅಗ್ನಿವೇಶ್ ಬೆಂಬಲಿಗರು ಅವರ ಮೇಲೆ ಹಲ್ಲೆಗೈದಿದ್ದಾರೆಂದು ಮಹಿಳಾ ಮೋರ್ಚಾ ನಾಯಕಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.