‘ಸಂಜು’ ಚಿತ್ರ ತಯಾರಕರಿಗೆ ಅಬು ಸಲೀಂ ನೋಟಿಸ್
ಮುಂಬೈ,ಜು.27 : ಇತ್ತೀಚೆಗೆ ಬಿಡುಗಡೆಗೊಂಡ ಬಾಲಿವುಡ್ ಚಿತ್ರ ‘ಸಂಜು' ನಿರ್ಮಾಣಕ್ಕೆ ಕಾರಣೀಕರ್ತರಾದ ರಾಜು ಹಿರಾನಿ ಹಾಗೂ ವಿಧು ವಿನೋದ್ ಚೋಪ್ರಾಗೆ 1933ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕುಖ್ಯಾತ ಭೂಗತ ಪಾತಕಿ ಅಬು ಸಲೀಂ ನೋಟಿಸ್ ಜಾರಿಗೊಳಿಸಿ ಈ ಚಿತ್ರದ ಮೂಲಕ ತನ್ನ ಮಾನಹಾನಿಗೈಯ್ಯಲಾಗಿದೆ ಎಂದು ಆರೋಪಿಸಿದ್ದಾನೆ. ಈ ಸಿನೆಮಾದಲ್ಲಿ ಅಬು ಸಲೀಂ ಬಗ್ಗೆ ತಪ್ಪಾದ ಮಾಹಿತಿ ನೀಡಲಾಗಿದೆ ಎಂದು ವಕೀಲ ಪ್ರಶಾಂತ್ ಪಾಂಡೆ ಮೂಲಕ ಸಲ್ಲಿಸಲಾದ ಈ ನೋಟಿಸಿನಲ್ಲಿ ಹೇಳಲಾಗಿದೆ.
ಚಿತ್ರದಲ್ಲಿ ಸಂಜಯ್ ದತ್ತ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಣಬೀರ್ ಕಪೂರ್ ತನ್ನಲ್ಲಿ 1993ರಲ್ಲಿ ದೇಶದಲ್ಲಿ ಉಂಟಾದ ಮತೀಯ ಉದ್ವಿಗ್ನತೆಯ ಸಂದರ್ಭ ಶಸ್ತ್ರಾಸ್ತ್ರಗಳಿದ್ದವು ಎಂದು ತಪ್ಪೊಪ್ಪಿಗೆ ಹೇಳಿಕೆ ನೀಡುವ ದೃಶ್ಯ ವಾಸ್ತವಕ್ಕೆ ದೂರವಾಗಿದ್ದು ಹಾಗೂ ನನ್ನ ಕಕ್ಷಿಗಾರ ಯಾವತ್ತೂ ದತ್ತ್ ಗೆ ಶಸ್ತ್ರಾಸ್ತ್ರ ಪೂರೈಕೆದಾರನಾಗಿಲ್ಲದೇ ಇರುವುದರಿಂದ ಇದು ನನ್ನ ಕಕ್ಷಿಗಾರ (ಸಲೀಂ)ಅವರ ಮಾನಹಾನಿಗೈದಂತೆ ಎಂದು ನೋಟಿಸ್ ಹೇಳಿದೆ.
ದತ್ತ್ ಗೆ ಅಬು ಸಲೀಂ ಶಸ್ತ್ರಾಸ್ತ್ರ ಪೂರೈಸಿಲ್ಲ ಎಂಬುದಕ್ಕೆ ಈ ಸ್ಫೋಟ ಪ್ರಕರಣದಲ್ಲಿ ಅಪ್ರೂವರ್ ಗಳಾದವರ ಸಾಕ್ಷ್ಯದಿಂದ ಸಾಬೀತು ಪಡಿಸಬಹುದಾಗಿದೆ. ಅಬು ಸಲೀಂ ಯಾವತ್ತೂ ದತ್ತ್ ಅವರನ್ನು ಭೇಟಿಯಾಗಿರಲೇ ಇಲ್ಲ. ಮಾನಹಾನಿಗೈಯ್ಯುವಂತಹ ಚಿತ್ರದ ದೃಸ್ಯ ಸಲೀಂ ಅವರ ‘ಗೌರವಕ್ಕೆ ಚ್ಯುತಿ' ತರುತ್ತದೆ,'' ಎಂದು ನೋಟಿಸ್ ಹೇಳಿದೆ. ಈ ನಿರ್ದಿಷ್ಟ ದೃಶ್ಯಕ್ಕಾಗಿ ಕ್ಷಮೆಯಾಚಿಸಿ ಪ್ರಕಟಣೆ ನಿಡಬೇಕೆಂದೂ ಸಲೀಂ ವಕೀಲರು ಆಗ್ರಹಿಸಿದ್ದಾರೆ.