ರಾಫೇಲ್ ಒಪ್ಪಂದ ‘ಭ್ರಷ್ಟ’ ಎಂದಿದ್ದ ಸುಬ್ರಮಣಿಯನ್ ಸ್ವಾಮಿ
ಕೋರ್ಟಿಗೆ ಹೋಗುವುದಾಗಿ ಹೇಳಿದ್ದ ಬಿಜೆಪಿ ನಾಯಕ
ಹೊಸದಿಲ್ಲಿ, ಜು.30: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಈ ಹಿಂದೊಮ್ಮೆ ರಾಫೇಲ್ ಒಪ್ಪಂದದ ವಿರುದ್ಧ ನ್ಯಾಯಾಲಯಕ್ಕೆ ಹೋಗುವುದಾಗಿ ಬೆದರಿಕೆ ಹಾಕಿದ್ದ ವಿಷಯ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ.
2015ರ ಎಪ್ರಿಲ್ ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದ ಸ್ವಾಮಿ, ಈ ಒಪ್ಪಂದವನ್ನು ಭ್ರಷ್ಟ ಎಂದು ಬಣ್ಣಿಸಿದ್ದರಲ್ಲದೆ ಇದು ಬಿಜೆಪಿಗೆ ಕೆಟ್ಟ ಹೆಸರು ತರುವುದಾಗಿಯೂ ಹೇಳಿದ್ದರು. ಜಗತ್ತಿನ ಬೇರೆ ಯಾವುದೇ ದೇಶ ರಾಫೇಲ್ ಯುದ್ಧ ವಿಮಾನಗಳನ್ನು ಖರೀದಿಸುತ್ತಿಲ್ಲ ಹಾಗೂ ಈ ಹಿಂದೆ ಈ ಯುದ್ಧ ವಿಮಾನ ಖರೀದಿಸಲು ಕೆಲ ದೇಶಗಳು ಸಹಿ ಹಾಕಿದ್ದ ಒಪ್ಪಂದವನ್ನು ರದ್ದುಪಡಿಸಲಾಗಿತ್ತೆಂಬುದನ್ನು ಆಗ ಸ್ವಾಮಿ ಉಲ್ಲೇಖಿಸಿದ್ದರು.
“ಈ ವಿಮಾನಗಳನ್ನು ಭಾರತ ಖರೀದಿಸದೇ ಇದ್ದರೆ ಸಂಸ್ಥೆ ಮುಚ್ಚಬೇಕಾಗುತ್ತದೆ ಎಂದು ಡಸ್ಸಾಲ್ಟ್ ಹೇಳಿದೆ. ಸ್ವಿಝರ್ ಲ್ಯಾಂಡ್ ನಂತಹ ದೇಶಗಳು ಒಪ್ಪಂದಕ್ಕೆ ಸಹಿ ಹಾಕಿ ನಂತರ ರದ್ದುಪಡಿಸಿವೆ. ಕೇಂದ್ರದ ನರೇಂದ್ರ ಮೋದಿ ಸರಕಾರಕ್ಕೆ ಫ್ರಾನ್ಸ್ ದೇಶವನ್ನು ಖುಷಿ ಪಡಿಸಬೇಕೆಂದಿದ್ದರೆ ಅದು ನಷ್ಟದಲ್ಲಿರುವ ಡಸ್ಸಾಲ್ಟ್ ಏವ್ಯೇಶನ್ ಸಂಸ್ಥೆಯನ್ನೇ ಖರೀದಿಸಬೇಕಿತ್ತು'' ಎಂದು ಸ್ವಾಮಿ ಆಗ ಹೇಳಿದ್ದರು.
“ಅಧಿಕಾರಿಗಳು ಮೋದಿಗೆ ತಪ್ಪು ಸಲಹೆಗಳನ್ನು ನೀಡುತ್ತಿದ್ದಾರೆ. ರಕ್ಷಣಾ ಸಚಿವಾಲಯವೂ ಈ ವಿಮಾನ ಖರೀದಿಯ ವಿರುದ್ಧವಾಗಿತ್ತು” ಎಂಬುದು ಸ್ವಾಮಿಯ ಅಭಿಪ್ರಾಯವಾಗಿತ್ತು. ಸ್ವಾಮಿಯ ಈ ಹೇಳಿಕೆಯ ನಂತರವೇ ಕಾಂಗ್ರೆಸ್ ಈ ರಾಫೇಲ್ ಒಪ್ಪಂದದ ವಿಚಾರವಾಗಿ ಸರಕಾರದ ವಿರುದ್ಧ ದಾಳಿ ನಡೆಸಿತ್ತು.
ರಾಫೇಲ್ ಒಪ್ಪಂದ ‘ಭ್ರಷ್ಟ’ ಎಂದು ಸುಬ್ರಮಣಿಯನ್ ಸ್ವಾಮಿ ಹೇಳಿದ 2015 ಎಪ್ರಿಲ್ 11ರ ಸುದ್ದಿಯ ಲಿಂಕ್ ಈ ಕೆಳಗಿದೆ