ಶಾಸಕಿ ಭೇಟಿ ನೀಡಿದ ನಂತರ ದೇವಸ್ಥಾನವನ್ನು ಗಂಗಾಜಲದಿಂದ ಶುದ್ಧೀಕರಿಸಿದರು!
ಫೋಟೊ ಕೃಪೆ: aninews.in
ಹಮೀರ್ ಪುರ್, ಜು.30: ಬಿಜೆಪಿ ಶಾಸಕಿಯೊಬ್ಬರು ಭೇಟಿ ನೀಡಿದ ನಂತರ ದೇವಸ್ಥಾನವನ್ನು ಗಂಗಾಜಲದಿಂದ ಶುದ್ಧೀಕರಿಸಿ ದೇವರ ಮೂರ್ತಿಗಳನ್ನು ಶುದ್ಧೀಕರಣಕ್ಕಾಗಿ ಅಲಹಾಬಾದ್ ಗೆ ಸಾಗಿಸಿರುವ ಬಗ್ಗೆ ವರದಿಯಾಗಿದೆ.
ಜು.12ರಂದು ಬಿಜೆಪಿ ಶಾಸಕಿ ಮನೀಶಾ ಅನುರಾಗಿ ಇಲ್ಲಿನ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಇಲ್ಲಿನ ಸಂಪ್ರದಾಯದ ಬಗ್ಗೆ ಅವರಿಗೆ ಅರಿವಿರಲಿಲ್ಲ. “ಇಂತಹ ಘಟನೆಗಳು ನಡೆಯುವುದು ಮಹಿಳೆಯರಿಗೆ ಮಾಡುವ ಅವಮಾನವಾಗಿದೆ” ಎಂದು ಮನೀಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಕುರಾ ಖುರ್ದ್ ಗ್ರಾಮದಲ್ಲಿರುವ ಈ ದೇವಸ್ಥಾನವು ಮನೀಷಾರ ಕ್ಷೇತ್ರ ವ್ಯಾಪ್ತಿಯಲ್ಲೇ ಇದೆ. ಆದರೆ ಇಲ್ಲಿ ಮಹಿಳೆಯರಿಗೆ ಪ್ರವೇಶವಿಲ್ಲ. ಪ್ರಾರ್ಥನೆ ಸಲ್ಲಿಸುವುದಕ್ಕಾಗಿ ಮನೀಶಾ ಕಾರ್ಯಕರ್ತರ ಜೊತೆ ದೇವಸ್ಥಾನಕ್ಕೆ ಆಗಮಿಸಿದ್ದರು.
“ದೇವಸ್ಥಾನದೊಳಕ್ಕೆ ಇದುವರೆಗೆ ಒಬ್ಬ ಮಹಿಳೆಯೂ ಪ್ರವೇಶಿಸಿಲ್ಲ. ಮನೀಶಾ ದೇವಸ್ಥಾನಕ್ಕೆ ಭೇಟಿ ನೀಡಿದಾಗ ನಾನು ಅಲ್ಲಿರಲಿಲ್ಲ. ಇಲ್ಲದಿದ್ದರೆ ನಾನು ತಡೆಯುತ್ತಿದ್ದೆ” ಎಂದು ದೇವಸ್ಥಾನದ ಅರ್ಚಕರು ತಿಳಿಸಿದ್ದಾರೆ.
Next Story