ಕಾನೂನುಬಾಹಿರ ಟೆಲಿಫೋನ್ ಎಕ್ಸ್ಚೇಂಜ್ ಸ್ಥಾಪನೆ ಪ್ರಕರಣದಲ್ಲಿ ವಿಚಾರಣೆ ಎದುರಿಸಿ: ದಯಾನಿಧಿ ಮಾರನ್ಗೆ ಸುಪ್ರೀಂ ನಿರ್ದ
ಹೊಸದಿಲ್ಲಿ, ಜು. 30: ಕೇಂದ್ರದ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ತಿರಸ್ಕರಿಸಿದ್ದು ಹಾಗೂ ಸಹೋದರ ಕಲಾನಿಧಿ ಮಾರನ್ ಅವರ ಸನ್ ಟಿವಿ ನೆಟ್ವರ್ಕ್ಗೆ ಲಾಭವಾಗಲು ಕಾನೂನು ಬಾಹಿರ ಟೆಲಿಫೋನ್ ಎಕ್ಸ್ಚೇಂಜ್ ಸ್ಥಾಪಿಸಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಿಚಾರಣೆ ಎದುರಿಸುವಂತೆ ನಿರ್ದೇಶಿಸಿದೆ.
ಸಿಬಿಐ ನ್ಯಾಯಾಲಯ ದಯಾನಿಧಿ ಮಾರನ್ ಅವರನ್ನು ಬಿಡುಗಡೆಗೊಳಿಸಿ ನೀಡಿದ ಆದೇಶವನ್ನು ಮದ್ರಾಸ್ ಉಚ್ಚ ನ್ಯಾಯಾಲಯ ಜುಲೈ 25ರಂದು ತಿರಸ್ಕರಿಸಿರುವುದನ್ನು ಪ್ರಶ್ನಿಸಿ ದಯಾನಿಧಿ ಮಾರನ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ತೀರ್ಪಿನ ಮಧ್ಯಪ್ರವೇಶಿಸಲು ಒಲವು ಹೊಂದಿಲ್ಲ ಹಾಗೂ ಎಲ್ಲ ಆಪಾದನೆಗಳನ್ನು ವಿಚಾರಣೆಯ ಸಂದರ್ಭದಲ್ಲಿ ನಿರ್ವಹಿಸಬಹುದು ಎಂದು ನ್ಯಾಯಮೂರ್ತಿ ರಂಜನ್ ಗಗೋಯ್, ಆರ್. ಬಾನುಮತಿ ಹಾಗೂ ನವೀನ್ ಸಿನ್ಹಾ ಅವರನ್ನು ಒಳಗೊಂಡ ಪೀಠ ಹೇಳಿದೆ.
ಡಿಎಂಕೆ ವರಿಷ್ಠ ಎಂ. ಕರುಣಾನಿಧಿ ಅವರ ಮೊಮ್ಮಗ ದಯಾನಿಧಿ ಮಾರನ್ ಅವರು ಯುಪಿಎ-1 ಸರಕಾರದಲ್ಲಿ ಸಂವಹನ ಹಾಗೂ ಮಾಹಿತಿ ತಂತ್ರಜ್ಞಾನದ ಸಚಿವರಾಗಿದ್ದರು. ಅಧಿಕಾರದ ಹುದ್ದೆ ದುರುಪಯೋಗ ಮಾಡಿರುವುದಾಗಿ ಹಾಗೂ ಚೆನ್ನೈಯಲ್ಲಿ ತನ್ನ ನಿವಾಸದಲ್ಲಿ ಖಾಸಗಿ ಟೆಲಿಫೋನ್ ಎಕ್ಸ್ಚೇಂಜ್ ಅನ್ನು ಸ್ಥಾಪಿಸಿರುವುದಾಗಿ ಸಿಬಿಐ ಆರೋಪಿಸಿದೆ. ಈ ಟೆಲಿಫೋನ್ ಎಕ್ಸ್ಚೇಂಜ್ ಅನ್ನು ಸನ್ ನೆಟ್ವರ್ಕ್ ಉದ್ಯಮದ ವ್ಯವಹಾರ ವರ್ಗಾವಣೆಗೆ ಬಳಸಲಾಗುತ್ತಿತ್ತು. ಚೆನೈಯ ಗೋಪಾಲಪುರಂ ಪ್ರದೇಶದಲ್ಲಿ ಹಾಗೂ ಬೋಟ್ಕ್ಲಬ್ನಲ್ಲಿರುವ ದಯಾನಿಧಿ ಮಾರನ್ ಅವರ ನಿವಾಸದಲ್ಲಿ ಸುಮಾರು 700ಕ್ಕೂ ಅಧಿಕ ಅತ್ಯುಚ್ಛ ಟೆಲಿಕಮ್ಯೂನಿಕೇಶನ್ ಲೈನ್ಗಳನ್ನು ಸ್ಥಾಪಿಸಲಾಗಿತ್ತು. ಇದರಿಂದ ಸರಕಾರದ ಬೊಕ್ಕಸಕ್ಕೆ ಸುಮಾರು 1.78 ಕೋ. ರೂ. ನಷ್ಟ ಉಟಾಗಿತ್ತು. ಈ ಹಿನ್ನೆಲೆಯಲ್ಲಿ 2016 ಡಿಸೆಂಬರ್ 9ರಂದು ಸಿಬಿಐ ಆರೋಪ ಪಟ್ಟಿ ದಾಖಲಿಸಿತ್ತು.