ಮರಾಠಾ ಮೀಸಲಾತಿ: ಮುಂಬೈನಲ್ಲಿ ಜೈಲ್ ಭರೋ ಪ್ರತಿಭಟನೆ
ಮುಂಬೈ, ಆ.1: ಮರಾಠಾ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಶೇ.50 ಮೀಸಲಾತಿಯನ್ನು ತಕ್ಷಣವೇ ಜಾರಿಗೊಳಿಸುವಂತೆ ಬೇಡಿಕೆಯೊಂದಿಗೆ ಮರಾಠಾ ಕಾರ್ಯಕರ್ತರು ಬುಧವಾರ ಇಲ್ಲಿ ಜೈಲ್ ಭರೋ ಪ್ರತಿಭಟನೆಯನ್ನು ನಡೆಸಿದರು.
ಮೀಸಲಾತಿ ಪರ ಗುಂಪುಗಳು ಮರಾಠಾ ಕ್ರಾಂತಿ ಮೋರ್ಚಾದ ನೇತೃತ್ವದಲ್ಲಿ ದಕ್ಷಿಣ ಮುಂಬೈನ ಆಝಾದ್ ಮೈದಾನದಲ್ಲಿ ಜೈಲ್ ಭರೋ ಪ್ರತಿಭಟನೆಯನ್ನು ನಡೆಸಿದವು. ರಾಜ್ಯದ ಕೆಲವು ಭಾಗಗಳಲ್ಲಿಯೂ ಇಂತಹುದೇ ಪ್ರತಿಭಟನೆಗಳು ನಡೆದಿವೆ.
ಪ್ರತಿಭಟನೆಯಿಂದ ಮಹಾನಗರದಲ್ಲಿ ರೈಲು ಮತ್ತು ರಸ್ತೆ ಸಂಚಾರಕ್ಕೆ ಯಾವುದೇ ವ್ಯತ್ಯಯವುಂಟಾಗಿರಲಿಲ್ಲ ಎಂದು ಪೊಲೀಸರು ತಿಳಿಸಿದರು.
ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ರಲ್ಲಿ ಮತ್ತು ಮರಾಠಾ ಸಮುದಾಯಕ್ಕೆ ಮೀಸಲಾತಿಯನ್ನು ಒದಗಿಸುವ ಅವರ ಪೊಳ್ಳು ಭರವಸೆಗಳಲ್ಲಿ ನಾವು ವಿಶ್ವಾಸವನ್ನು ಕಳೆದುಕೊಂಡಿದ್ದೇವೆ ಎಂದು ಆಝಾದ್ ಮೈದಾನದಲ್ಲಿ ಪ್ರತಿಭಟನಾಕಾರರೋರ್ವರು ಹೇಳಿದರು.
ರಾಜ್ಯದ 12 ಕೋಟಿ ಜನಸಂಖ್ಯೆಯಲ್ಲಿ ಮರಾಠಾ ಸಮುದಾಯದ ಪಾಲು ಶೇ.30ರಷ್ಟಿದೆ. ಕಳೆದ 10 ದಿನಗಳಿಂದ ಪ್ರತಿಭಟನೆಗಳು ಹಿಂಸೆಗೆ ತಿರುಗಿವೆ. ಈವರೆಗೆ ಆರು ಪ್ರತಿಭಟನಾಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮರಾಠಾ ಯುವಜನತೆಗೆ ಫಡ್ನವೀಸ್ ಕೊಡುಗೆ
ಹಿಂದುಳಿದ ಸಮುದಾಯಗಳಿಗೆ ಆರ್ಥಿಕ ನೆರವನ್ನು ನೀಡುವ ಯೋಜನೆಯಡಿ ಮರಾಠಾ ಸಮುದಾಯದ ಯುವಜನತೆ ಪಡೆಯುವ ಸಾಲಗಳಿಗೆ ಮಹಾರಾಷ್ಟ್ರ ಸರಕಾರವು ಜಾಮೀನುದಾರನಾಗುವ ಕೊಡುಗೆಯನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸಮುದಾಯದ ಮುಂದಿರಿಸಿದ್ದಾರೆ.
ಕಂದಾಯ ಸಚಿವ ಚಂದ್ರಕಾಂತ್ ಪಾಟೀಲ್ ನೇತೃತ್ವದಲ್ಲಿ ಮಂಗಳವಾರ ನಡೆದ ಸಂಪುಟ ಉಪಸಮಿತಿಯ ಸಭೆಯು ಈ ನಿರ್ಧಾರವನ್ನು ಕೈಗೊಂಡಿದೆ. ಮರಾಠಾ ಸಮುದಾಯದ ಏಳಿಗೆಗಾಗಿ ಕ್ರಮಗಳನ್ನು ಕೈಗೊಳ್ಳಲು ಈ ಸಮಿತಿಯನ್ನು ರಚಿಸಲಾಗಿತ್ತು. ಬ್ಯಾಂಕುಗಳು ಮರಾಠಾ ಸಮುದಾಯದ ಜನರಿಗೆ ಸಾಲಗಳನ್ನು ಮಂಜೂರು ಮಾಡುತ್ತಿಲ್ಲ ಮತ್ತು ಭದ್ರತೆಯನ್ನು ಕೇಳುತ್ತಿವೆ ಎಂಬ ದೂರುಗಳು ಸಮಿತಿಗೆ ಬಂದಿದ್ದವು.
ಸಮುದಾಯದದ ಎಂ.ಫಿಲ್ ಮತ್ತು ಪಿಎಚ್ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಫೆಲೋಶಿಪ್ಗಳನ್ನು ನೀಡಲು ಮತ್ತು 608 ವೃತ್ತಿಪರ ಕೋರ್ಸ್ಗಳಿಗಾಗಿ ವಾರ್ಷಿಕ ಎಂಟು ಲ.ರೂ.ಕೌಟುಂಬಿಕ ಆದಾಯ ಮೀರದ ವಿದ್ಯಾರ್ಥಿಗಳ ಅರ್ಧದಷ್ಟು ಶಿಕ್ಷಣ ಶುಲ್ಕವನ್ನೂ ಭರಿಸಲೂ ಸರಕಾರವು ನಿರ್ಧರಿಸಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸುವ ಮರಾಠಾ ಸಮುದಾಯದ ವಿದ್ಯಾರ್ಥಿಗಳಿಗೆ ನೆರವಾಗಲು ಪುಣೆಯಲ್ಲಿ ತರಬೇತಿ ಕೇಂದ್ರವನ್ನು ಸ್ಥಾಪಿಸುವ ಮತ್ತು ಇತರ ಸಂಸ್ಥೆಗಳಲ್ಲಿ ಮಾರ್ಗದರ್ಶನ ಮತ್ತು ತರಬೇತಿ ಪಡೆಯಬಯಸುವ ವಿದ್ಯಾರ್ಥಿಗಳ ಶುಲ್ಕವನ್ನು ಭರಿಸುವ ಕೊಡುಗೆಯನ್ನೂ ಸರಕಾರವು ಮುಂದಿರಿಸಿದೆ.