ನಾಗರಿಕರು ದೇಶದ ಆತ್ಮ, ಆಮದಿತ ಮತ ಬ್ಯಾಂಕ್ ಅಲ್ಲ: ಅರುಣ್ ಜೇಟ್ಲಿ
ಹೊಸದಿಲ್ಲಿ, ಆ. 2: ಅಸ್ಸಾಂ ಎನ್ಆರ್ಸಿ ವಿಷಯದಲ್ಲಿ ಭಾರತದ ಸಾರ್ವಭೌಮತ್ವದೊಂದಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಟವಾಡುತ್ತಿದ್ದಾರೆ ಎಂದು ಆರೋಪಿಸಿರುವ ಕೇಂದ್ರ ಸಚಿವ ಅರುಣ್ ಜೇಟ್ಲಿ, ನಾಗರಿಕರು ದೇಶದ ಆತ್ಮ, ಅವರು ಆಮದಿತ ಮತ ಬ್ಯಾಂಕ್ ಅಲ್ಲ ಎಂದಿದ್ದಾರೆ. ಮಾಜಿ ಪ್ರಧಾನಿಗಳಾದ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಪ್ರತಿಪಾದನೆಗೆ ವಿರುದ್ಧವಾಗಿ ರಾಹುಲ್ ಗಾಂಧಿ ಅಸ್ಸಾಂ ಎನ್ಆರ್ಸಿ ಕುರಿತಂತೆ ಭಿನ್ನ ನಿಲುವು ತಳೆದಿದ್ದಾರೆ ಎಂದು ಜೇಟ್ಲಿ ಫೇಸ್ಬುಕ್ ಪೋಸ್ಟ್ನಲ್ಲಿ ವಾಗ್ದಾಳಿ ನಡೆಸಿದ್ದಾರೆ. ತನ್ನ ಗಡಿ ಸಮರ್ಥಿಸಿಕೊಳ್ಳುವುದು, ಯಾವುದೇ ನುಸುಳುವಿಕೆ ತಡೆಯುವುದು, ಹಾಗೂ ದೇಶದ ಜನರ ಜೀವ ರಕ್ಷಿಸುವುದು ಪ್ರತಿ ಸರಕಾರದ ಕರ್ತವ್ಯ ಎಂದು ಜೇಟ್ಲಿ ಹೇಳಿದರು. ‘‘ಇದು (ಕಾಂಗ್ರೆಸ್) ದೇಶದ ಸಾರ್ವಭೌಮತೆಯೊಂದಿಗೆ ರಾಜಿ ಮಾಡಿಕೊಳ್ಳುತ್ತಿದೆ. ರಾಹುಲ್ ಗಾಂಧಿ, ಮಮತಾ ಬ್ಯಾನರ್ಜಿಯಂತಹ ನಾಯಕರು ಭಾರತದ ಸಾರ್ವಭೌಮತ್ವ ಆಟದ ವಸ್ತುವಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಸಾರ್ವರ್ಭಮತ್ವ ಹಾಗೂ ಪೌರತ್ವ ದೇಶದ ಆತ್ಮ, ಆಮದಿತ ಮತ ಬ್ಯಾಂಕ್ ಅಲ್ಲ’’ ಎಂದು ಜೇಟ್ಲಿ ಹೇಳಿದ್ದಾರೆ.