ಕತ್ತು ಹಿಸುಕಿ ವ್ಯಕ್ತಿಯ ಕೊಲೆ: ಪತ್ನಿ, ಪ್ರಿಯಕರನ ಬಂಧನ
ಪತ್ತನಾಪುರಂ(ಕೇರಳ), ಆ.5: ಮನೆಯೊಳಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ರಾಜನ್ ಸಾವಿನ ಹಿಂದಿರುವ ರಹಸ್ಯವನ್ನು ಪೊಲೀಸರು ಬೇಧಿಸಿದ್ದಾರೆ. ರಾಜನ್ ರನ್ನು ಅವರ ಪತ್ನಿ ಹಾಗು ಪ್ರಿಯಕರ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ತನಾಪುರಂ ನೆಡುಂಪರಂಬ್ ಎಲಾಯಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ರಾಜನ್ರನ್ನು ಪತ್ನಿ ಮಂಜು(32) ಮತ್ತು ಆಕೆಯ ಪ್ರಿಯಕರ ಅಜಿತ್(23) ಸೇರಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದ್ದು, ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಜುಲೈ 24ರಂದು ಮನೆಯಲ್ಲಿ ರಾಜನ್ ರ ಮೃತದೇಹ ಪತ್ತೆಯಾಗಿತ್ತು.
ಪತಿ ಮೃತಪಟ್ಟಿದ್ದಾರೆ ಎಂದು ಊರವರಿಗೆ ಮಂಜು ಮೊದಲು ತಿಳಿಸಿದ್ದಳು. ನಂತರ ಅಜಿತ್ ಪೊಲೀಸರಿಗೆ ಮಾಹಿತಿ ನೀಡಿದ್ದ. ಕತ್ತು ಹಿಸುಕಿ ಕೊಲೆ ಮಾಡಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಹಿರಂಗವಾಗಿತ್ತು. ಪೊಲೀಸರು ಈ ಬಗ್ಗೆ ಅಜಿತ್ ಮತ್ತು ಮಂಜುವಿನ ವಿಚಾರಣೆ ನಡೆಸಿದ್ದು, ತಾವೇ ಕೊಲೆ ಮಾಡಿದ್ದಾಗಿ ಈ ಇಬ್ಬರು ತಪ್ಪೊಪ್ಪಿಕೊಂಡಿದ್ದಾರೆ.
ರಾಜನ್- ಮಂಜು ದಂಪತಿಗೆ ಮೂವರು ಮಕ್ಕಳಿದ್ದಾರೆ. ಪತ್ತನಾಪುರಂ ಸಿಐ ಎಂ. ಅನ್ವರ್, ಎಸ್ಸೈ ಪುಷ್ಪಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.