ಹಾಪುರ್ ಹತ್ಯೆ ಪ್ರಕರಣ ಕೈಗೆತ್ತಿಕೊಳ್ಳಲಿರುವ ಸುಪ್ರೀಂ ಕೋರ್ಟ್
ಎನ್ ಡಿಟಿವಿಯ ರಹಸ್ಯ ಕಾರ್ಯಾಚರಣೆಯಲ್ಲಿ ಗೋರಕ್ಷಕರ ಕ್ರೌರ್ಯ ಬಯಲು
ಹೊಸದಿಲ್ಲಿ, ಆ.7: ಗೋರಕ್ಷಣೆ ಹೆಸರಿನ ಹತ್ಯೆಗೆ ಸಂಬಂಧಿಸಿ ತಮ್ಮ ಕೃತ್ಯಗಳನ್ನು ಗೋರಕ್ಷಕರು ಒಪ್ಪಿಕೊಂಡ ಎನ್ ಡಿಟಿವಿಯ ರಹಸ್ಯ ಕಾರ್ಯಾಚರಣೆ ದೇಶಾದ್ಯಂತ ಸುದ್ದಿಯಾದ ನಂತರ ಹಾಪುರ್ ಹತ್ಯೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ಒಪ್ಪಿದೆ.
ರಹಸ್ಯ ಕಾರ್ಯಾಚರಣೆಯನ್ನು ಎನ್ ಡಿಟಿವಿ ಪ್ರಸಾರ ಮಾಡಿದ ನಂತರ ಹಾಪುರ್ ಹತ್ಯೆ ಪ್ರಕರಣದ ಸಂತ್ರಸ್ತರ ವಕೀಲರು ‘ತುರ್ತು ವಿಚಾರಣೆ’ಗಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಸಿಜೆಐ ದೀಪಕ್ ಮಿಶ್ರಾ ಪ್ರಕರಣವನ್ನು ಇದಕ್ಕೆ ಒಪ್ಪಿದ್ದಾರೆ ಎಂದು ವರದಿಯಾಗಿದೆ.
ಜೂನ್ 18ರಂದು ನಡೆದ ಹಾಪುರ್ ನಲ್ಲಿ ನಡೆದ ಗುಂಪು ಹತ್ಯೆ ದೇಶಾದ್ಯಂತ ಸುದ್ದಿಯಾಗಿತ್ತು. 45 ವರ್ಷದ ವರ್ತಕ ಕಾಸಿಂ ಖುರೇಷಿಯವರನ್ನು ಗೋರಕ್ಷಕರು ಥಳಿಸಿ ಕೊಂದಿದ್ದರು. ಘಟನೆಯಲ್ಲಿ 65 ವರ್ಷದ ಸಮೀವುದ್ದೀನ್ ಗಂಭೀರವಾಗಿ ಗಾಯಗೊಂಡಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿತ್ತು. ಆದರೆ 18 ದಿನಗಳ ನಂತರ ಯುಧಿಷ್ಟಿರ್ ಸಿಂಗ್ ಎಂಬಾತ ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ. ಎನ್ ಡಿಟಿವಿ ಈತನೊಂದಿಗೆ ರಹಸ್ಯ ಕ್ಯಾಮರಾ ಕಾರ್ಯಾಚರಣೆ ನಡೆಸಿತ್ತು. ಈ ಕೃತ್ಯದಲ್ಲಿ ತನ್ನ ಪಾತ್ರವಿಲ್ಲ ಎಂದು ಕೋರ್ಟ್ ಗೆ ತಿಳಿಸಿದ್ದ ಸಿಸೋಡಿಯಾ ರಹಸ್ಯ ಕಾರ್ಯಾಚರಣೆಯಲ್ಲಿ ತನ್ನ ಕೃತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದ.