ಕಥುವಾ ಅತ್ಯಾಚಾರ ಹತ್ಯೆ ಪ್ರಕರಣ: ಆ. 8ರಂದು ಸಾಕ್ಷಿಗೆ ಹಿಂಸೆ ಆರೋಪದ ವಿಚಾರಣೆ
ಹೊಸದಿಲ್ಲಿ, ಆ. 7: ನಕಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಜಮ್ಮು ಹಾಗೂ ಕಾಶ್ಮೀರ ಪೊಲೀಸರು ತನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಕಥುವಾ ಬಾಲಕಿಯ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿರುವ ತಾಲಿಬ್ ಹುಸೈನ್ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಬುಧವಾರ ನಡೆಸಲಿದೆ.
ಮನವಿಯ ತುರ್ತು ವಿಚಾರಣೆಗೆ ಕೋರಿ ಹುಸೈನ್ ಅವರ ಸಂಬಂಧಿ ಸಲ್ಲಿಸಿದ್ದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಹಾಗೂ ಇಂದಿರಾ ಬ್ಯಾನರ್ಜಿ ಅವರನ್ನು ಒಳಗೊಂಡ ಪೀಠ ಪರಿಗಣಿಸಿದೆ. ಹುಸೈನ್ ಅವರ ಸೋದರ ಸಂಬಂಧಿ ಹೇಬಿಯಸ್ ಕಾರ್ಪಸ್ ರಿಟ್ ಅರ್ಜಿ ಸಲ್ಲಿಸಿದ್ದಾರೆ. ‘‘ಹುಸೈನ್ ಅವರನ್ನು ಕಾನೂನು ಬಾಹಿರವಾಗಿ ವಶದಲ್ಲಿ ಇರಿಸಲಾಗಿದೆ ಹಾಗೂ ಹಿಂಸೆ ನೀಡಲಾಗುತ್ತಿದೆ’’ ಎಂದು ಮನವಿಯಲ್ಲಿ ಹೇಳಲಾಗಿದೆ.
ನಕಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕಸ್ಟಡಿಯಲ್ಲಿ ಹುಸೈನ್ಗೆ ಹಿಂಸೆ ನೀಡುತ್ತಿದ್ದಾರೆ ಎಂದು ಹುಸೈನ್ ಅವರ ಕುಟುಂಬಿಕರು ಹೇಳಿದ್ದಾರೆ. ಹುಸೈನ್ ರಾಜ್ಯದ ಸಾಂಭಾದಲ್ಲಿ ಹಿಂಸೆಗೆ ಒಳಗಾಗಿದ್ದಾರೆ ಎಂದು ದೂರುದಾರರ ಪರ ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಹೇಳಿದ್ದಾರೆ ಹಾಗೂ ಈ ವಿಷಯದಲ್ಲಿ ನ್ಯಾಯಾಂಗ ಮಧ್ಯ ಪ್ರವೇಶಿಸಬೇಕು ಎಂದು ಮನವಿ ಮಾಡಿದ್ದಾರೆ.