ದಲಿತ ವಿದ್ಯಾರ್ಥಿಗೆ ಮೂತ್ರ ಕುಡಿಸಿದ ಸಹಪಾಠಿಗಳು
ಅವಮಾನದಿಂದ ಆತ್ಮಹತ್ಯೆಗೆ ಯತ್ನಿಸಿದ ಬಾಲಕ
ಜಲಂಧರ್, ಆ.8: ದಲಿತ ವಿದ್ಯಾರ್ಥಿಯೋರ್ವನಿಗೆ ಸಹಪಾಠಿಗಳು ಮೂತ್ರ ಕುಡಿಸಿದ ಘಟನೆ ಪಂಜಾಬ್ನ ಜಲಂಧರ್ನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ. ಘಟನೆಯ ಬಗ್ಗೆ ಶಾಲೆಯ ಶಿಕ್ಷಕರಲ್ಲಿ ದೂರಿದಾಗ ಅವರು ವಿದ್ಯಾರ್ಥಿಗೆ ಕಪಾಳಮೋಕ್ಷ ಮಾಡಿದ್ದು ಇದರಿಂದ ನೊಂದ ವಿದ್ಯಾರ್ಥಿ ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ವರದಿಯಾಗಿದೆ.
ಶಾಲೆಯಲ್ಲಿ ತನ್ನ ಪುತ್ರನ ನೀರಿನ ಬಾಟಲಿಗೆ ಉಳಿದ ಹುಡುಗರು ಮೂತ್ರ ತುಂಬಿಸಿದ್ದರು. ಇದನ್ನು ತಿಳಿಯದೆ ಆತ ನೀರು ಕುಡಿದ ಬಳಿಕ ಎಲ್ಲರೂ ಸೇರಿ ತಮಾಷೆ ಮಾಡಿದ್ದಾರೆ. ಈ ಬಗ್ಗೆ ಶಿಕ್ಷಕರಲ್ಲಿ ದೂರಿತ್ತಾಗ ಅವರು ಜಾತಿನಿಂದನೆ ಮಾಡಿ ಅವಾಚ್ಯವಾಗಿ ಬೈದಿದ್ದಲ್ಲದೆ ಕಪಾಳಕ್ಕೆ ಬಾರಿಸಿದ್ದಾರೆ . ಬಳಿಕ ಪ್ರಾಂಶುಪಾಲರ ಬಳಿ ಎಳೆದೊಯ್ದಿದ್ದಾರೆ . ಬಳಿಕ ತನ್ನನ್ನು ಶಾಲೆಗೆ ಕರೆಸಿಕೊಂಡು ಅವಮಾನ ಮಾಡಿದ್ದೆಲ್ಲದೆ ಮಗನ ಕುರಿತು ಜಾತಿ ನಿಂದನೆ ಮಾಡಲಾಗಿದೆ ಎಂದು ಬಾಲಕನ ತಾಯಿ ದೂರು ನೀಡಿದ್ದಾರೆ.
ಘಟನೆಯಿಂದ ಮನನೊಂದ ಬಾಲಕ ಮನೆಗೆ ಬಂದು ಮನೆಯ ಮಹಡಿಯಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದು ಗಂಭೀರ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬಾಲಕನ ತಾಯಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಶಿಕ್ಷಕ ಶ್ರೀಕಿ ಶರ್ಮ ಎಂಬವರ ವಿರುದ್ಧ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಬಳಿಕ ರಾಜ್ಯದ ಪರಿಶಿಷ್ಟ ಜಾತಿ ಆಯೋಗವು ಶಾಲೆಗೆ ಮತ್ತು ಬಾಲಕನ ಮನೆಗೆ ಭೇಟಿ ನೀಡಿದ್ದು ಶಾಲೆಯ ಆಡಳಿತದಿಂದ ವರದಿ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.