ಎನ್ ಆರ್ ಸಿಯಿಂದ ತನ್ನ ಕುಟುಂಬ ಬೇರೆಯಾಗುತ್ತದೆ ಎಂದು ಹೆದರಿ ರೈತ ಆತ್ಮಹತ್ಯೆ: ಆರೋಪ
ಗುವಾಹಟಿ,ಆ.8: ಮಂಗಳವಾರ ಲೋವರ್ ಅಸ್ಸಾಮಿನ ಧುಬ್ರಿಯ ಕನುರಿ ಗ್ರಾಮದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ ಬಡರೈತ ದೇಬನ್ ಬರ್ಮನ್(70) ರಾಷ್ಟ್ರೀಯ ಪೌರತ್ವ ರಿಜಿಸ್ಟರ್(ಎನ್ಆರ್ಸಿ)ನಲ್ಲಿ ತನ್ನ ಮಗ ಮತ್ತು ಮೊಮ್ಮಕ್ಕಳ ಹೆಸರುಗಳು ನಾಪತ್ತೆಯಾಗಿದ್ದರಿಂದ ಖಿನ್ನತೆಗೊಳಗಾಗಿದ್ದರು ಎಂದು ಅವರ ಕುಟುಂಬ ಮೂಲಗಳು ಹೇಳಿವೆ.
ತನ್ನ ಕುಟುಂಬವು ಒಡೆದು ಹೋಗಲಿದೆ ಎಂದು ಅವರು ಹೆದರಿಕೊಂಡಿದ್ದರು ಎಂದು ಬರ್ಮನ್ ಸೊಸೆ ಕನಿಕಾ ಬರ್ಮನ್ ಹೇಳಿದರು.
ಜುಲೈ 30ರಂದು ಪ್ರಕಟಿಸಲಾಗಿದ್ದ ಎನ್ಆರ್ಸಿ ಕರಡು ಪಟ್ಟಿಯಿಂದ ಬಿಟ್ಟುಹೋಗಿರುವ 40 ಲಕ್ಷ ಹೆಸರುಗಳಲ್ಲಿ ಬರ್ಮನ್ ಪುತ್ರ ಮಹೇಂದ್ರ,ಮೊಮ್ಮಕ್ಕಳಾದ ಕಿಷನ್ ಬರ್ಮನ್(16) ಮತ್ತು ವೌಸುಮಿ ಬರ್ಮನ್(12) ಅವರ ಹೆಸರುಗಳೂ ಸೇರಿವೆ. ಬರ್ಮನ್, ಅವರ ಪತ್ನಿ ಮತ್ತು ಕನಿಕಾ ಹೆಸರುಗಳು ಪಟ್ಟಿಯಲ್ಲಿವೆ. ಈ ಕುಟುಂಬವು ಕೋಚ್ ರಾಜಬಂಗ್ಷಿ ಸಮುದಾಯಕ್ಕೆ ಸೇರಿದೆ.
ತನ್ನ ಕುಟುಂಬವು ವಿಭಜನೆಗೊಳ್ಳುತ್ತದೆ. ಮಹೇಶ,ಕಿಷನ್ ಮತ್ತು ವೌಸುಮಿ ಅವರನ್ನು ಪೊಲೀಸರು ಒಯ್ದು ಜೈಲಿಗೆ ತಳ್ಳುತ್ತಾರೆ ಎಂದು ಅವರು ಭಯಪಟ್ಟುಕೊಂಡಿದ್ದರು ಎಂದು ಕನಿಕಾ ಹೇಳಿದರು.
ಬರ್ಮನ್ ಆತ್ಮಹತ್ಯೆ ಕಾರಣವನ್ನು ತಿಳಿದುಕೊಳ್ಳಲು ನಾವು ತನಿಖೆ ನಡೆಸುತ್ತಿದ್ದೇವೆ. ಆದರೆ ಅವರ ಕುಟುಂಬದ ಕೆಲವರ ಹೆಸರುಗಳು ಎನ್ಆರ್ಸಿ ಪಟ್ಟಿಯಿಂದ ಬಿಟ್ಟುಹೋಗಿರುವುದು ನಿಜ ಎಂದು ಎಸ್ಪಿ ಲಾಂಗ್ನಿಟ್ ತೆರಾಂಗ್ ತಿಳಿಸಿದರು.