ರಾಜ್ಯಸಭಾ ನೂತನ ಉಪ ಸಭಾಪತಿಯಾಗಿ ಹರಿವಂಶ್ ಆಯ್ಕೆ
ಹೊಸದಿಲ್ಲಿ, ಆ.9: ರಾಜ್ಯಸಭೆಯ ನೂತನ ಉಪ ಸಭಾಪತಿಯಾಗಿ ಎನ್ಡಿಎ ಅಭ್ಯರ್ಥಿ, ಬಿಹಾರದ ಜೆಡಿಯು ಸಂಸದ ಹರಿವಂಶ್ ನಾರಾಯಣ ಸಿಂಗ್ ಗುರುವಾರ ಆಯ್ಕೆಯಾಗಿದ್ದಾರೆ. ಹರಿವಂಶ್ ವಿರುದ್ಧ ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಕರ್ನಾಟಕದ ಕಾಂಗ್ರೆಸ್ನ ಹಿರಿಯ ಮುಖಂಡ ಬಿ.ಕೆ. ಹರಿಪ್ರಸಾದ್ ಸ್ಪರ್ಧಿಸಿದ್ದರು.
ಹರಿವಂಶ್ 125 ಮತಗಳನ್ನು ಪಡೆದರೆ, ಹರಿಪ್ರಸಾದ್ 105 ಮತಗಳನ್ನು ಪಡೆದರು. ಕೇರಳದ ಪಿ.ಜೆ. ಕುರಿಯನ್ ನಿವೃತ್ತಿಯಿಂದ ಜೂನ್ನಲ್ಲಿ ರಾಜ್ಯಸಭೆಯ ಉಪ ಸಭಾಪತಿ ಸ್ಥಾನ ತೆರವಾಗಿತ್ತು.
ಬಿಹಾರದ ಬಲಿಯಾದಲ್ಲಿ ಜನಿಸಿರುವ ಮಾಜಿ ಪತ್ರಕರ್ತರೂ ಆಗಿರುವ ಹರಿವಂಶ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಕೈ ಕುಲುಕಿ ಅಭಿನಂದಿಸಿದರು. ರಾಜ್ಯಸಭಾ ಉಪ ಸಭಾಪತಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಕೆ. ಹರಿಪ್ರಸಾದ್ಗೂ ಅಭಿನಂದನೆ ಸಲ್ಲಿಸಲು ಬಯಸುವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Next Story