ಕಿಡ್ನಿ ಕಸಿ ಬಳಿಕ ಮೊದಲ ಬಾರಿ ಸಂಸತ್ನಲ್ಲಿ ಹಾಜರಾದ ಜೇಟ್ಲಿ
ಹೊಸದಿಲ್ಲಿ, ಆ.9: ಕೇಂದ್ರ ಸಚಿವ ಅರುಣ್ ಜೇಟ್ಲಿ ಮೇ 14ರಂದು ಕಿಡ್ನಿ ಕಸಿ ಮಾಡಿಸಿಕೊಂಡ ಬಳಿಕ ಮೊದಲ ಬಾರಿ ಗುರುವಾರ ಸಂಸತ್ನಲ್ಲಿ ಹಾಜರಾದರು. ರಾಜ್ಯಸಭಾ ಉಪ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿದರು.
ರಾಜ್ಯಸಭೆಯ ನಾಯಕನಾಗಿರುವ ಜೇಟ್ಲಿ ಸಂಸತ್ ಸಂಕೀರ್ಣದೊಳಗೆ ಪ್ರವೇಶಿಸುವ ಮೊದಲು ಕಾರಿನೊಳಗೆ ತಮ್ಮ ಮುಖಕ್ಕೆ ಮಾಸ್ಕ್ ಧರಿಸಿಕೊಂಡಿದ್ದು ಕಂಡು ಬಂದಿತು.
ಮೂಲಗಳ ಪ್ರಕಾರ ಜೇಟ್ಲಿ ಆಗಸ್ಟ್ನಲ್ಲಿ ತಮ್ಮ ಕಚೇರಿ ಕೆಲಸ ಆರಂಭಿಸಲಿದ್ದಾರೆ. ಜೇಟ್ಲಿ ಅನುಪಸ್ಥಿತಿಯಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಕಳೆದ ಮೂರು ತಿಂಗಳುಗಳಿಂದ ವಿತ್ತ ಸಚಿವಾಲಯವನ್ನು ಹೆಚ್ಚುವರಿಯಾಗಿ ನಿಭಾಯಿಸುತ್ತಿದ್ದಾರೆ.
ಜೇಟ್ಲಿ ಕಚೇರಿ ಕೆಲಸಗಳಿಂದ ಹೊರಗುಳಿದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಅವರು ಜಿಎಸ್ಟಿ, ರಫೇಲ್ ಒಪ್ಪಂದ ಹಾಗೂ ದೇಶದ ಆರ್ಥಿಕ ಪರಿಸ್ಥಿತಿ ಸಹಿತ ಹಲವು ವಿಚಾರಗಳ ಬಗ್ಗೆ ಟ್ವೀಟ್ ಮಾಡಿದ್ದರು. ಜಿಎಸ್ಟಿ ಜಾರಿಯಾದ ಒಂದು ವರ್ಷಾಚರಣೆಯ ಸಂದರ್ಭದಲ್ಲಿ ಟೆಲಿಕಾನ್ಫರೆನ್ಸ್ ಮೂಲಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದರು.