ಆಧಾರ್ ಸವಾಲಿನಲ್ಲಿ ನಾನೇ ಗೆದ್ದೆ ಎಂದ ಟ್ರಾಯ್ ವರಿಷ್ಠ ಆರ್.ಎಸ್. ಶರ್ಮಾ!
ಹೊಸದಿಲ್ಲಿ, ಆ. 9: ಆಧಾರ್ ಸಂಖ್ಯೆ ಬಹಿರಂಗಗೊಳಿಸಿರುವುದರಿಂದ ತನಗೆ ಯಾವುದೇ ಹಾನಿ ಉಂಟಾಗಿಲ್ಲ ಎಂದು ಟ್ರಾಯ್ ಅಧ್ಯಕ್ಷ ಆರ್.ಎಸ್. ಶರ್ಮಾ ಟ್ವಿಟ್ಟರ್ನಲ್ಲಿ ಹೇಳಿದ್ದಾರೆ. ‘‘ನಾನು ಆಧಾರ್ ಸವಾಲನ್ನು ಗೆದ್ದಿದ್ದೇನೆ. ನನಗಾಗಲಿ, ನನ್ನ ಆಧಾರ್ ಕಾರ್ಡ್ಗಾಗಲಿ ಯಾವುದೇ ಹಾನಿ ಉಂಟಾಗಿಲ್ಲ’’ ಎಂದು ಶರ್ಮಾ ಹೇಳಿದ್ದಾರೆ.
ತನ್ನ ಆಧಾರ್ ಸಂಖ್ಯೆ ಬಹಿರಂಗಗೊಳಿಸಿ ಹ್ಯಾಕರ್ಗಳಿಗೆ ಸವಾಲು ಒಡ್ಡಿದ್ದ ಶರ್ಮಾ ಅವರು, ಆಧಾರ್ ಸಂಖ್ಯೆಯನ್ನು ಬಹಿರಂಗಗೊಳಿಸುವುದರಿಂದ ಹಾಗೂ ಶೇರ್ ಮಾಡುವುದರಿಂದ ಯಾರಿಗೂ ಹಾನಿ ಉಂಟಾಗಲು ಸಾಧ್ಯವಿಲ್ಲ ಎಂದು ಹೇಳಿದ 11 ದಿನಗಳ ಬಳಿಕ ಅವರು ಮತ್ತೆ ಈ ಹೇಳಿಕೆ ನೀಡಿದ್ದಾರೆ.
ಈ ರೀತಿಯ ಸವಾಲು ಒಡ್ಡಿರುವುದಕ್ಕೆ ಯುಐಡಿಎಐ ಹಾಗೂ ತಜ್ಞರು ಶರ್ಮಾ ಅವರನ್ನು ತೀವ್ರವಾಗಿ ಟೀಕಿಸಿದ್ದರು. 12 ಅಂಕೆಗಳ ಆಧಾರ್ ಸಂಖ್ಯೆಯನ್ನು ಬಹಿರಂಗಗೊಳಿಸಿ ಸವಾಲು ಎಸೆಯುವುದರಿಂದ ವೈಯುಕ್ತಿಕ ಹಾನಿ ಉಂಟಾಗುವ ಸಾಧ್ಯತೆ ಇದೆ ಎಂದು ಯುಐಡಿಎಐನ ಮಾಜಿ ಸ್ಥಾಪಕ ಮುಖ್ಯ ಕಾರ್ಯದರ್ಶಿ ಹೇಳಿದ್ದರು. ‘‘ಆಧಾರ್ ನಂಬರ್ ಶೇರ್ ಮಾಡುವುದರಿಂದ ನಿಮ್ಮ ಡಿಜಿಟಲ್ ದುರ್ಬಲತೆ ಹೆಚ್ಚುವುದಿಲ್ಲ ಎಂದು ನಾನು ಒತ್ತಿ ಹೇಳುತ್ತೇನೆ. ಆಧಾರ್ನಲ್ಲಿ ಯಾವುದೇ ದೋಷವಿಲ್ಲ.’’ ಎಂದು ಶರ್ಮಾ ಹೇಳಿದ್ದಾರೆ. ಬಾಕ್ಸ್
ಹೊಸದಿಲ್ಲಿ: ಟ್ರಾಯ್ಗೆ ಆರ್.ಎಸ್. ಶರ್ಮಾ ಅವರನ್ನು ಮರು ನೇಮಕ ಮಾಡಲಾಗಿದೆ ಎಂದು ಕೇಂದ್ರ ಸರಕಾರ ಗುರುವಾರ ಪ್ರಕಟಿಸಿದೆ. ಶರ್ಮಾ ಅವರು 2020 ಸೆಪ್ಟಂಬರ್ 30ರ ವರೆಗೆ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ. ಶರ್ಮಾ ಅವರು ಯುಐಡಿಎಐಯ ಮಾಜಿ ಕಾರ್ಯ ನಿರ್ವಹಣಾ ಅಧಿಕಾರಿ.