ಗೋಸಂರಕ್ಷಕರ ಬಗ್ಗೆ ಬಾಬಾ ರಾಮ್ದೇವ್ ಹೇಳಿದ್ದೇನು?
ಜೈಪುರ, ಆ. 13: ಗೋಕಳ್ಳಸಾಗಾಣಿಕೆಯನ್ನು ತಡೆಯಲು ಪೊಲೀಸರು ಮತ್ತು ಸಾಮಾನ್ಯ ಆಡಳಿತ ವಿಫಲವಾದ್ದರಿಂದ ಅನಿವಾರ್ಯವಾಗಿ ಗೋಸಂರಕ್ಷಕರು ಬೀದಿಗಿಳಿಯಬೇಕಾಗಿ ಬಂದಿದೆ ಎಂದು ಯೋಗಗುರು, ಉದ್ಯಮಿ ರಾಮ್ದೇವ್ ಹೇಳಿದ್ದಾರೆ.
ಹಸುಗಳ ಕಳ್ಳಸಾಗಾಣಿಕೆಯಲ್ಲಿ ತೊಡಗಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಕೆಲವೇ ಗೋರಕ್ಷಕರು ಅಂಕೆ ಮೀರುವುದರಿಂದ ಉಳಿದ ಶೇಕಡ 90ರಷ್ಟು ನೈಜ ಗೋಸಂರಕ್ಷಕರ ಇಮೇಜ್ ಹಾಳಾಗುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
"ಗೋಕಳ್ಳರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಗೋಹಂತಕರಿಗೆ ಏಕೆ ಉತ್ತೇಜನ ಕೊಡಬೇಕು? ಇದು ಹಿಂದೆಂದೂ ಆಗಿರಲಿಲ್ಲ. ನಾವು ಕಸಾಯಿಖಾನೆಗೆ ಲೈಸನ್ಸ್ ಪಡೆದುಕೊಂಡವರ ಮತ್ತು ಜಾನುವಾರುಗಳನ್ನು ಒಯ್ಯುವವರ ಪರವಾಗಿಲ್ಲ" ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು.
ದೇಶದಲ್ಲಿ ಸಂಪೂರ್ಣ ಗೋಹತ್ಯೆ ಜಾರಿಗೆ ಬರಬೇಕು ಎಂದು ಒತ್ತಾಯಿಸಿದ ಅವರು, ಈ ಸಂಬಂಧ ಕೇಂದ್ರ ಸರ್ಕಾರ ಕಾನೂನು ರೂಪಿಸಬೇಕು ಎಂದು ಸಲಹೆ ಮಾಡಿದರು.
"ಪ್ರಧಾನಿ ನರೇಂದ್ರ ಮೋದಿಯವರಿಗಿಂತ ದೊಡ್ಡ ’ರಾಷ್ಟ್ರಭಕ್ತ’ ಮತ್ತು ’ಗೋಭಕ್ತ’ ಯಾರಿರಲು ಸಾಧ್ಯ? ಅವರು ಇಡೀ ದೇಶದಲ್ಲಿ ಕಸಾಯಿಖಾನೆ ನಿಷೇಧಿಸುವ ಕಾನೂನು ಜಾರಿಗೆ ತರಬೇಕು" ಎಂದು ರಾಮ್ದೇವ್ ಅಭಿಪ್ರಾಯಪಟ್ಟರು.
ಎನ್ಆರ್ಸಿ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, "ದೇಶದಲ್ಲಿ ಮೂರರಿಂದ ನಾಲ್ಕು ಕೋಟಿ ಮಂದಿ ಕಾನೂನುಬಾಹಿರವಾಗಿ ವಾಸಿಸುತ್ತಿದ್ದಾರೆ. ಇವರು ದೇಶದ ಭದ್ರತೆ ಹಾಗೂ ಸಮಗ್ರತೆಗೆ ಎಂದಿಗೂ ಅಪಾಯ. ಅವರು ಬಾಂಗ್ಲಾದೇಶಿಯರಿರಲಿ, ಪಾಕಿಸ್ತಾನಿ ಅಥವಾ ಅಮೆರಿಕಾದವರೇ ಇರಲಿ. ಕಾನೂನುಬಾಹಿರವಾಗಿ ವಾಸಿಸಲು ಯಾರಿಗೂ ಅವಕಾಶ ನೀಡಬಾರದು" ಎಂದು ಉತ್ತರಿಸಿದರು.