ಗಾಂಧೀಜಿಯವರ ಚಿಂತನೆ ಕುರಿತ ಸ್ಪರ್ಧೆ: ಪಾತಕಿ ಅರುಣ್ಗೌಳಿ ಪ್ರಥಮ
ನಾಗ್ಪುರ, ಆ.13: ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಪಾತಕಿ ಅರುಣ್ಗೌಳಿ ಗಾಂಧೀಜಿಯವರ ಚಿಂತನೆ ಆಧಾರಿತ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ.
ಸಹಯೋಗ ಟ್ರಸ್ಟ್ ಎಂಬ ಎನ್ಜಿಒ ಸಂಸ್ಥೆ, ಸರ್ವೋದಯ ಆಶ್ರಮ ಮತ್ತು ಮುಂಬೈಯ ಸರ್ವೋದಯ ಮಂಡಲ ಕಳೆದ ಅಕ್ಟೋಬರ್ನಲ್ಲಿ ಜೈಲುವಾಸಿಗಳಿಗಾಗಿ ಈ ಸ್ಪರ್ಧೆ ಏರ್ಪಡಿಸಿದ್ದು ಸುಮಾರು 160 ಖೈದಿಗಳು ಪಾಲ್ಗೊಂಡಿದ್ದರು. 80 ಅಂಕಗಳ ಪರೀಕ್ಷೆಯಲ್ಲಿ ನಾಗಪುರ ಜೈಲಿನಲ್ಲಿರುವ ಗಾವ್ಳಿ 74 ಅಂಕ ಗಳಿಸಿದ್ದಾನೆ. ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣಪತ್ರ ಹಾಗೂ ಖಾದಿ ಉಡುಗೆಯನ್ನು ಬಹುಮಾನವಾಗಿ ನೀಡಲಾಗಿದೆ ಎಂದು ಸಹಯೋಗ ಟ್ರಸ್ಟ್ನ ಖಜಾಂಚಿ ರವೀಂದ್ರ ಭೂಸರಿ ತಿಳಿಸಿದ್ದಾರೆ. ಪರೀಕ್ಷೆ ಐಚ್ಛಿಕವಾಗಿದ್ದು ಖೈದಿಗಳಿಗೆ ಗಾಂಧಿ ಕುರಿತ ಪುಸ್ತಕಗಳನ್ನು ಒದಗಿಸಲಾಗಿತ್ತು.
ಮುಂಬೈಯ ದಗ್ಡಿ ಚಾಲ್ ಪ್ರದೇಶದಲ್ಲಿ ‘ಡ್ಯಾಡಿ’ ಎಂದೇ ಕರೆಸಿಕೊಳ್ಳುವ ಗಾವ್ಳಿ, 2007ರಲ್ಲಿ ನಡೆದಿದ್ದ ಶಿವಸೇನೆಯ ಕಾರ್ಪೊರೇಟರ್ ಕಮಲಾಕರ ಜಮ್ಸಂಡೇಕರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಪಟ್ಟಿದ್ದಾನೆ.