ಅಧಿಕೃತ ಓಣಂ ಆಚರಣೆಗಳನ್ನು ರದ್ದುಗೊಳಿಸಿದ ಕೇರಳ ಸರಕಾರ
ತಿರುವನಂತಪುರಂ,ಆ.14 : ಕೇರಳದಲ್ಲಿ ಸುರಿದ ಭಾರೀ ಮಳೆಯಿಂದ ಉಂಟಾದ ಪ್ರವಾಹ ಪರಿಸ್ಥಿತಿಯಿಂದ ಬಹಳಷ್ಟು ಸಾವುನೋವುಗಳು ಹಾಗೂ ಆಸ್ತಿಪಾಸ್ತಿ ಹಾನಿಯುಂಟಾಗಿರುವುದರಿಂದ ಈ ವರ್ಷ ಎಲ್ಲಾ ಅಧಿಕೃತ ಓಣಂ ಆಚರಣೆಗಳನ್ನು ರದ್ದುಗೊಳಿಸಲು ಅಲ್ಲಿನ ಸರಕಾರ ನಿರ್ಧರಿಸಿದೆ.
ಈ ವಾರದ ಕ್ಯಾಬಿನೆಟ್ ಸಭೆಯ ನಂತರ ಈ ನಿರ್ಧಾರದ ಬಗ್ಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಾಹಿತಿ ನೀಡಿದ್ದಾರೆ. "ನಮ್ಮ ಸಾವಿರಾರು ಮಂದಿ ಜನರು ಕಷ್ಟದಲ್ಲಿರುವಾಗ ಹಾಗೂ ಅವರ ಕಷ್ಟ ನಿವಾರಿಸಲು ಎಲ್ಲರಿಂದಲೂ ಸಹಾಯವನ್ನು ನಾವು ಕೇಳುತ್ತಿರುವ ಈ ಸಮಯದಲ್ಲಿ ಹಬ್ಬದ ಆಚರಣೆಯನ್ನು ನಾವು ಮಾಡುವುದು ಸರಿಯಾಗದು,'' ಎಂದು ವಿಜಯನ್ ಹೇಳಿದ್ದಾರೆ.
ರಾಜ್ಯಕ್ಕೆ ವಿವಿಧ ಕಡೆಗಳಿಂದ ಸಹಾಯ ಹರಿದು ಬರುತ್ತಿದೆ. ಕೇಂದ್ರ ಸರಕಾರವೂ ಸೇರಿದಂತೆ ನೆರೆಯ ರಾಜ್ಯಗಳು, ಚಿತ್ರ ಕಲಾವಿದರು, ಸರಕಾರಿ ಹಾಗೂ ಖಾಸಗಿ ರಂಗದ ಉದ್ಯೋಗಿಗಳು, ಜನಸಾಮಾನ್ಯರು, ಶಾಲಾ ಮಕ್ಕಳು ಹಾಗೂ ಕಾರ್ಮಿಕರು ಕೂಡ ತಮ್ಮಿಂದಾದಷ್ಟು ಸಹಾಯ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ನಟ ಮೋಹನ್ ಲಾಲ್ ಕೂಡ ನೆರೆ ಪರಿಹಾರಕ್ಕಾಗಿ ಮುಖ್ಯಮಂತ್ರಿಗೆ ರೂ 25 ಲಕ್ಷದ ಚೆಕ್ ನೀಡಿದ್ದಾರೆ.