ಒಂದು ದೇಶ, ಒಂದು ಚುನಾವಣೆಯ ಕುರಿತು ಹದಿನೈದು ದಿನಗಳಲ್ಲಿ ವರದಿ ಜಾರಿ
ಹೊಸದಿಲ್ಲಿ, ಆ.14: ಕಾನೂನು ಆಯೋಗದ ಮುಖ್ಯಸ್ಥರಾಗಿರುವ ಬಿ.ಎಸ್ ಚೌಹಾಣ್ ಆಗಸ್ಟ್ ತಿಂಗಳ ಕೊನೆಯಲ್ಲಿ ನಿವೃತ್ತರಾಗಲಿರುವ ಕಾರಣ, ಒಂದು ದೇಶ, ಒಂದು ಚುನಾವಣೆಯ ಬಗ್ಗೆ ಮುಂದಿನ ಹದಿನೈದು ದಿನಗಳ ಒಳಗೆ ಆಯೋಗ ವರದಿಯನ್ನು ಸಲ್ಲಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಾನೂನು ಆಯೋಗದ ವರದಿಯು ದೇಶದಲ್ಲಿ ಒಂದೇ ಬಾರಿ ಚುನಾವಣೆ ನಡೆಸುವ ಕುರಿತು ಸ್ಪಷ್ಟ ಚಿತ್ರಣವನ್ನು ಒದಗಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಷಯದಲ್ಲಿ ರಾಜಕೀಯ ಪಕ್ಷಗಳು ಚರ್ಚೆಯಲ್ಲಿ ಭಾಗಿಯಾಗುವಂತೆ ಆಯೋಗ ಮನವಿ ಮಾಡಿದೆ. ಒಂಬತ್ತು ರಾಜಕೀಯ ಪಕ್ಷಗಳು ಏಕಕಾಲದಲ್ಲಿ ಚುನಾವಣೆಗೆ ವಿರೋಧ ವ್ಯಕ್ತಪಡಿಸಿದ್ದರೆ ಬಿಜು ಜನತಾದಳ, ಎಐಎಡಿಎಂಕೆ, ಶಿರೋಮಣಿ ಅಕಾಲಿದಳ ಸೇರಿದಂತೆ ಆರು ಪಕ್ಷಗಳು ಏಕಕಾಲ ಚುನಾವಣೆಯ ಪರವಾಗಿವೆ. ಕಾಂಗ್ರೆಸ್ ಈ ಕಲ್ಪನೆಯೇ ಸರಿಯಿಲ್ಲ ಎಂದು ತಿಳಿಸಿದ್ದರೆ ತೃಣಮೂಲ ಕಾಂಗ್ರೆಸ್ ಮತ್ತು ಸಿಪಿಐ ಇದು ಸಂವಿಧಾನದ ರಚನೆಗೆ ವಿರುದ್ದವಾಗಿದೆ ಎಂದು ಅಭಿಪ್ರಾಯಿಸಿವೆ.
Next Story