ಅಕ್ರಮ ಅರಣ್ಯಭೂಮಿ ಒತ್ತುವರಿ ಕೇರಳ ನೆರೆಗೆ ಕಾರಣ: ಪರಿಸರ ತಜ್ಞ ಮಾಧವ ಗಾಡ್ಗಿಳ್
ಪುಣೆ, ಆ. 19: ಕೇರಳದಲ್ಲಿ ಸಂಭವಿಸಿದ ದುರುಂತ ಕಳೆದ ಒಂದು ದಶಕಗಳಿಂದ ನಡೆಸಿದ ಕಲ್ಲು ಗಣಿಗಾರಿಕೆ, ಅಕ್ರಮವಾಗಿ ಮಣ್ಣು ತೆಗೆದಿರುವುದರ ಪ್ರತಿಕೂಲ ಪರಿಣಾಮ ಹಾಗೂ ಮಾನವ ನಿರ್ಮಿತ ವಿಪತ್ತು ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸಯನ್ಸ್ನ ಸೆಂಟರ್ ಫಾರ್ ಇಕಾಲಾಜಿಕಲ್ ಸಯನ್ಸಸ್ನ ಸ್ಥಾಪಕ ಪರಿಸರ ತಜ್ಞ ಮಾಧವ್ ಗಾಡ್ಗಿಲ್ ಹೇಳಿದ್ದಾರೆ. ಕೇರಳದಲ್ಲಿ ಇತ್ತೀಚೆಗೆ ಸಂಭವಿಸಿದ ನೆರೆ ಹಾಗೂ ಭೂಕುಸಿತಕ್ಕೆ ಬೇಜವಾಬ್ದಾರಿಯುತ ಪರಿಸರ ನೀತಿ ಕಾರಣ.
ಕಲ್ಲು ಗಣಿಗಾರಿಕೆಯ ವಿಸ್ತರಣೆ, ಪ್ರವಾಸೋದ್ಯಮದ ಭಾಗವಾಗಿ ಅಣಬೆಗಳಂತೆ ತಲೆ ಎತ್ತುತ್ತಿರುವ ಗಗನ ಚುಂಬಿ ಕಟ್ಟಡಗಳು, ಖಾಸಗಿ ವ್ಯಕ್ತಿಗಳಿಂದ ಭೂಸ್ವಾಧೀನ ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ನೆರೆಗೆ ಪ್ರಮುಖ ಕಾರಣ ಎಂದು ಅವರು ತಿಳಿಸಿದ್ದಾರೆ. ಮುಂಗಾರು ಮಳೆಯಿಂದ ತೀವ್ರ ಹಾನಿಗೀಡಾದ ಪ್ರದೇಶಗಳು 2010ರಲ್ಲಿ ಕೇಂದ್ರ ಸರಕಾರ ರೂಪಿಸಿದ ಗಾಡ್ಗಿಲ್ ಸಮಿತಿ ಎಂದು ಕರೆಯಲಾಗುವ ಪಶ್ಚಿಮಘಟ್ಟ ಪರಿಸರ ತಜ್ಞರ ಸಮಿತಿ ವರ್ಗೀಕರಿಸಿದ ಪರಿಸರ ಸೂಕ್ಷ್ಮ ವಲಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ. ಕೇರಳ ಸರಕಾರದ ನಿಷ್ಕ್ರಿಯತೆ ಬಗ್ಗೆ ಆರೋಪಿಸಿರುವ ಗಾಡ್ಗಿಲ್, 2011ರಲ್ಲಿ ನಾವು ವರದಿ ಸಲ್ಲಿಸಿದೆವು. ಅಕ್ರಮ ಚಟುವಟಿಕೆಗಳನ್ನು ನಿಲ್ಲಿಸಲು ಶಿಫಾರಸು ಮಾಡಿರುವುದಕ್ಕೆ ಸರಕಾರಿ ಅಧಿಕಾರಿಗಳು ನಮ್ಮನ್ನ ಬಹಿಷ್ಕರಿಸಿದ ಅನುಭವ ನಮಗಾಯಿತು ಎಂದಿದ್ದಾರೆ. ಒಂದು ವೇಳೆ ಕಲ್ಲು ಗಣಿಗಾರಿಗಕೆ ನಿಲ್ಲಸದೇ ಇದ್ದರೆ, ಪ್ರಾಕೃತಿಕ ವಿಕೋಪ ಸಂಭವಿಸಲಿದೆ ಎಂದು ತುಂಬಾ ನಿರ್ದಿಷ್ಟವಾಗಿ ವರದಿಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ, ಸರಕಾರ ನಮ್ಮ ಶಿಫಾರಸಿಗೆ ಕಿವುಡಾಯಿತು ಎಂದು ಗಾಡ್ಗಿಳ್ ತಿಳಿಸಿದ್ದಾರೆ.