ಕರ್ನಾಟಕವು ಮಹಾದಾಯಿ ನೀರನ್ನು ತಿರುಗಿಸಿದರೆ ಗೋವಾದ ಮೇಲೆ ಪ್ರತಿಕೂಲ ಪರಿಣಾಮ: ಎನ್ಜಿಒ
ಪಣಜಿ,ಆ.20: ಮಹಾದಾಯಿ ಜಲವಿವಾದ ನ್ಯಾಯಾಧಿಕರಣವು ಮಹಾದಾಯಿ ನದಿಪಾತ್ರದಿಂದ ಹೊರಗೆ ನೀರನ್ನು ತಿರುಗಿಸಲು ಕರ್ನಾಟಕಕ್ಕೆ ಅವಕಾಶ ನೀಡಿರುವುದು ಗೋವಾದ ಪರಿಸರ ಮತ್ತು ಜನರಿಗೆ ಹಾನಿಕಾರಕವಾಗಲಿದೆ ಎಂದು ಪರಿಸರ ತಜ್ಞ ಹಾಗೂ ಮಹಾದಾಯಿ ಬಚಾವೊ ಅಭಿಯಾನದ ಕಾರ್ಯದರ್ಶಿ ರಾಜೇಂದ್ರ ಕೇರಕರ್ ಅವರು ಸೋಮವಾರ ಇಲ್ಲಿ ತಿಳಿಸಿದರು.
ಮಹಾದಾಯಿ ನದಿನೀರಿನಲ್ಲಿ ಗೋವಾದ ಪಾಲನ್ನು ಕಡಿಮೆ ಮಾಡಿರುವುದರಿಂದ ರಾಜ್ಯದ ಪರಿಸರ ವ್ಯವಸ್ಥೆ,ಕೃಷಿ ಮತ್ತು ಮೀನುಗಾರಿಕೆಯ ಮೇಲೆ ದುಷ್ಪರಿಣಾಮವಾಗಲಿದೆ ಎಂದು ಅವರು ಹೇಳಿದರು.
ಮಹಾದಾಯಿಯ ಒಟ್ಟು 111 ಕಿ.ಮೀ.ಉದ್ದದ ಪೈಕಿ ಗೋವಾದಲ್ಲಿ 76 ಕಿ.ಮೀ. ಮತ್ತು ಕರ್ನಾಟಕದಲ್ಲಿ ಕೇವಲ 35 ಕಿ.ಮೀ.ನದಿ ಹರಿಯುತ್ತಿದೆ. ಆಹಾರ ಸರಪಳಿಯಲ್ಲಿ ಪೋಷಕಾಂಶಗಳ ಸೇರ್ಪಡೆಯಲ್ಲಿ ನದಿಯ ಮೇಲ್ಭಾಗವು ಪ್ರಮುಖ ಪಾತ್ರವನ್ನು ಹೊಂದಿರುತ್ತದೆ. ಕರ್ನಾಟಕವು ನೀರನ್ನು ತಿರುಗಿಸುವ ತನ್ನ ಯೋಜನೆಯನ್ನು ಕಾರ್ಯಗತಗೊಳಿಸಿದರೆ ಅದು ಮಹಾದಾಯಿಯ ಜಲಲಕ್ಷಣಗಳಲ್ಲಿ ಬದಲಾವಣೆಗಳನ್ನು ಮತ್ತು ನೀರಿನ ಹರಿವನ್ನು ಕಡಿಮೆ ಮಾಡುತ್ತದೆ. ಇದರಿಂದಾಗಿ ವಸತಿ ಪ್ರದೇಶಗಳ ಸುಸ್ಥಿರತೆ ಮತ್ತು ಬೆಳವಣಿಗೆಗೆ ಆಗತ್ಯವಾದ ಸೂಕ್ಷ್ಮ ಸಮತೋಲನ ಹಾಳಾಗುತ್ತದೆ ಎಂದರು.