ಮೂರು ತಿಂಗಳ ಬಳಿಕ ಕಚೇರಿ ಕೆಲಸ ಆರಂಭಿಸಿದ ಅರುಣ್ ಜೇಟ್ಲಿ
ಹೊಸದಿಲ್ಲಿ, ಆ.23: ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೇಂದ್ರದ ಹಣಕಾಸು ಹಾಗೂ ಕಾರ್ಪೋರೇಟ್ ವ್ಯವಹಾರಗಳ ಸಚಿವ ಅರುಣ್ ಜೇಟ್ಲಿ ಮೂರು ತಿಂಗಳ ಬಿಡುವಿನ ಬಳಿಕ ತಮ್ಮ ಕಚೇರಿ ಕೆಲಸವನ್ನು ಪುನರಾರಂಭಿಸಿದ್ದಾರೆ.
65 ವರ್ಷದ ಜೇಟ್ಲಿ ಮೇ 14 ರಂದು ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಚಿಕಿತ್ಸೆಗೆ ಒಳಪಡುವ ಉದ್ದೇಶದಿಂದ ಎಪ್ರಿಲ್ ಆರಂಭದಲ್ಲೇ ಕಚೇರಿ ಕೆಲಸಕ್ಕೆ ಹಾಜರಾಗುವುದನ್ನು ನಿಲ್ಲಿಸಿದ್ದರು. ರೈಲ್ವೇ ಸಚಿವ ಪಿಯೂಷ್ ಗೋಯೆಲ್ ಹಂಗಾಮಿ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಜೇಟ್ಲಿ ಕಚೇರಿ ಕೆಲಸಗಳಲ್ಲಿ ಗೈರುಹಾಜರಾಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದರು. ಆರ್ಥಿಕ ಹಾಗೂ ಸಾಮಾಜಿಕ ವಿಷಯಕ್ಕೆ ಸಂಬಂಧಿಸಿ ಹಲವು ಬ್ಲಾಗ್ಗಳನ್ನು ಬರೆದಿದ್ದಾರೆ.
ಜೇಟ್ಲಿ ಸರ್ಜರಿಗೆ ಒಳಗಾದ ಬಳಿಕ ಮೊದಲ ಬಾರಿ ಆ.9 ರಂದು ಸಂಸತ್ತಿಗೆ ಹಾಜರಾಗಿದ್ದರು. ರಾಜ್ಯಸಭೆಯ ಉಪ ಸಭಾಪತಿ ಸ್ಥಾನಕ್ಕೆ ನಡೆದ ಚುನಾವಣೆಗೆ ಮತ ಚಲಾಯಿಸಿದ್ದರು. ನರೇಂದ್ರ ಮೋದಿ ಸರಕಾರ 2014ರಲ್ಲಿ ಅಸ್ತಿತ್ವಕ್ಕೆ ಬಂದಾಗಲೇ ಜೇಟ್ಲಿ ಹಣಕಾಸು ಸಚಿವರಾಗಿದ್ದರು. ರಾಜ್ಯಸಭೆಯ ನಾಯಕನಾಗಿಯೂ ಕಾರ್ಯನಿರ್ವಹಿಸಿದ್ದರು.