ವಿದೇಶಿ ನೆರವು ಸ್ವೀಕರಿಸಲು ಒಂದು ಬಾರಿ ವಿನಾಯಿತಿ ನೀಡಿ: ಕೇಂದ್ರ ಸಚಿವ ಅಲ್ಫೋನ್ಸ್ ಮನವಿ
ಹೊಸದಿಲ್ಲಿ, ಆ. 23: ಕೇರಳದ ನರೆ ಪರಿಹಾರ ನಿಧಿಗೆ ಯಾವುದೇ ದೇಶಗಳಿಂದ ನೆರವು ಸ್ವೀಕರಿಸುವುದಿಲ್ಲ ಎಂದು ಕೇಂದ್ರ ಸರಕಾರ ನಿರಂತರ ಪ್ರತಿಪಾದಿಸುತ್ತಿರುವ ನಡುವೆಯೇ ಅದಕ್ಕೆ ವಿರುದ್ಧ ನಿಲುವು ತಳೆದಿರುವ ಕೇಂದ್ರ ಸಚಿವ ಕೆ.ಜೆ ಅಲ್ಫೋನ್ಸ್, ನೆರೆಯಿಂದ ಜರ್ಝರಿತವಾದ ಕೇರಳಕ್ಕೆ ಯುಎಇ ನೀಡಲು ಬಯಸಿದ 700 ಕೋ. ರೂ. ದೇಣಿಗೆಯ ಅಗತ್ಯ ಇದೆ ಎಂದಿದ್ದಾರೆ.
ಕೇರಳ ಮೂಲದವರಾದ ಅಲ್ಫೋನ್ಸ್, ಈ ಹಿಂದಿನ ಸರಕಾರ ಅನುಸರಿಸಿದ ‘ವಿದೇಶಿ ನೆರವು ನಿರಾಕರಣೆ’ ನೀತಿಯನ್ನು ಮೋದಿ ಸರಕಾರ ಅನುಸರಿಸುತ್ತಿದೆ. 2004ರಲ್ಲಿ ಸಂಭವಿಸಿದ ಸುನಾಮಿ ಹಾಗೂ 2013ರಲ್ಲಿ ಸಂಭವಿಸಿದ ಉತ್ತರಾಖಂಡ ದುರಂತದಲ್ಲಿ ಕೂಡ ವಿದೇಶಿ ನೆರವನ್ನು ಸ್ವೀಕರಿಸಿರಲಿಲ್ಲ ಎಂದಿದ್ದಾರೆ. ‘‘ನಾನು ಹಲವು ಸಚಿವರೊಂದಿಗೆ ಮಾತುಕತೆ ನಡೆಸಿದ್ದೇನೆ. ಕೇರಳಕ್ಕೆ ವಿದೇಶಿ ನೆರವಿನ ಅಗತ್ಯ ಇದೆ ಎಂದು ನಾನು ಭಾವಿಸುತ್ತೇನೆ. ಕೇರಳ ವಿದೇಶಿ ನೆರವು ಪಡೆಯಲು ಸಹಾಯವಾಗುವಂತೆ ಒಂದು ಬಾರಿ ವಿನಾಯಿತಿ ನೀಡುವಂತೆ ನಾನು ಅವರಲ್ಲಿ ವಿನಂತಿಸಿದ್ದೇನೆ. ನಿರ್ಧಾರ ಅವರದ್ದು. ಇದು ನನ್ನ ನಿಲುವು’’ ಎಂದು ಅವರು ಹೇಳಿದ್ದಾರೆ.