ನಕ್ಸಲ್ಬಾಧಿತ ಪ್ರದೇಶದ ಪ್ರಪ್ರಥಮ ವೈದ್ಯೆಯಾಗಲಿರುವ ಮಾಯಾ ಕಶ್ಯಪ್
ರಾಪುರ, ಆ.24: ಛತ್ತೀಸ್ಗಢದ ನಕ್ಸಲ್ಬಾಧಿತ ಪ್ರದೇಶವಾಗಿರುವ ದೋರ್ನಪಾಲ್ ಜಿಲ್ಲೆಯ ಯುವತಿ ಮಾಯಾ ಕಶ್ಯಪ್ ಚಿಕ್ಕಂದಿನಿಂದಲೂ ವೈದ್ಯೆಯಾಗಬೇಕೆಂಬ ಕನಸು ಕಂಡಿದ್ದಳು. ಈ ವರ್ಷದ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಮಾಯಾ ಅಂಬಿಕಾಪುರ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿಗೆ ಸೇರ್ಪಡೆಗೊಂಡಿದ್ದು, ಈ ಪ್ರದೇಶದಲ್ಲಿ ಎಂಬಿಬಿಎಸ್ ಕಲಿತು ವೈದ್ಯೆಯಾದ ಪ್ರಥಮ ಯುವತಿ ಎಂಬ ಹೆಗ್ಗಳಿಕೆಯತ್ತ ಒಂದು ಹೆಜ್ಜೆ ಮುಂದಿರಿಸಿದ್ದಾಳೆ.
ಸರಕಾರಿ ಶಾಲೆಯೊಂದರಲ್ಲಿ ಶಿಕ್ಷಣ ಪಡೆದಿದ್ದ ಮಾಯಾಳಿಗೆ ಎಂಬಿಬಿಎಸ್ ಪದವಿಗೆ ಸೇರ್ಪಡೆಯಾಗುವುದು ಸುಲಭದ ಮಾತಾಗಿರಲಿಲ್ಲ. ಈಕೆ 6ನೇ ತರಗತಿಯಲ್ಲಿದ್ದಾಗ ತಂದೆ ನಿಧನರಾಗಿದ್ದರು. ನಾಲ್ಕು ಮಕ್ಕಳ ಕುಟುಂಬದ ದೈನಂದಿನ ಖರ್ಚು ವೆಚ್ಚ ಸರಿದೂಗಿಸುವುದೇ ತಾಯಿಗೆ ಸವಾಲಿನ ಕೆಲಸವಾಗಿತ್ತು. “‘ಪಾಕೆಟ್ ಮನಿ’ ಎಂದು ತಾಯಿ ತಿಂಗಳಿಗೆ 500 ರೂ. ನೀಡುತ್ತಿದ್ದರು. ಅದರಿಂದ ಪುಸ್ತಕಗಳನ್ನು ಖರೀದಿಸಿ ‘ನೀಟ್’ ಪರೀಕ್ಷೆ ಬರೆದೆ. ನನ್ನ ಗುರಿ ಸ್ಪಷ್ಟವಾಗಿದ್ದರಿಂದ ಪಾಸಾಗಲು ಕಷ್ಟವಾಗಲಿಲ್ಲ” ಎಂದು ಮಾಯಾ ವಿವರಿಸುತ್ತಾರೆ.
2023ರಲ್ಲಿ ವೈದ್ಯಕೀಯ ಪದವಿ ಪಡೆದು ತನ್ನ ಊರಿಗೆ ಮರಳಿ ಅಲ್ಲಿ ವೈದ್ಯಕೀಯ ಸೇವೆಯಿಂದ ವಂಚಿತರಾಗಿರುವ ಬಡಜನರಿಗೆ ಸಹಾಯ ಮಾಡುವುದಾಗಿ ಮಾಯಾ ಹೇಳುತ್ತಾರೆ.