ಕೇರಳ: ಹಾವುಗಳ ಬಗ್ಗೆ ಸರಕಾರದಿಂದ ಮುನ್ನೆಚ್ಚರಿಕೆ
ತಿರುವನಂತಪುರ, ಆ. 25: ನೆರೆ ನೀರು ಇಳಿಕೆಯಾಗುತ್ತಿದ್ದು, ಹಾವುಗಳು ಕಂಡು ಬರುವ ಸಾಧ್ಯತೆ ಇರುವುದರಿಂದ ಮನೆಗೆ ಹಿಂದಿರುಗುವ ಜನರು ಎಚ್ಚರ ವಹಿಸುವಂತೆ ಹಾಗೂ ಆಸ್ಪತ್ರೆಯಲ್ಲಿ ವಿಷ ನಿರೋಧಕ ಔಷಧಗಳನ್ನು ಸಿದ್ಧವಾಗಿ ಇರಿಸುವಂತೆ ಆಸ್ಪತ್ರೆಗಳಿಗೆ ಕೇರಳ ಸರಕಾರ ಸೂಚಿಸಿದೆ.
ರಾಜ್ಯದ ವಿವಿಧ ಭಾಗಗಳಲ್ಲಿ ನೆರೆ ನೀರಿನಿಂದ ಮುಳುಗಡೆಯಾಗಿರುವ ಮನೆಗಳ ಕಾರ್ಪೆಟ್ವ ಅಡಿ, ಬಟ್ಟೆಬರೆ ಜೊತೆ, ವಾಷಿಂಗ್ ಮೆಷಿನ್ಗಳ ಒಳಗೆ ಹಾವುಗಳು ಅಡಗಿರುವ ಸಾಧ್ಯತೆ ಇದೆ ಎಂದು ಸರಕಾರ ಹೇಳಿದೆ. ‘‘ನೆರೆ ಪೀಡಿತ ಹಲವು ಮನೆಗಳಲ್ಲಿ ಹಾವುಗಳು ಕಂಡು ಬಂದಿವೆ.
ಮನೆಗೆ ಹಿಂದಿರುಗುವವರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ’’ ಎಂದು ರಾಜ್ಯ ಸರಕಾರದ ವಕ್ತಾರ ಸುಭಾಷ್ ಟಿ.ವಿ. ತಿಳಿಸಿದ್ದಾರೆ. ‘‘ಪರಿಸ್ಥಿತಿ ಎದುರಿಸಲು ಆಸ್ಪತ್ರೆಗಳು ಸಿದ್ದವಾಗಿರಬೇಕು. ಹಾವು ಕಚ್ಚಿದವರಿಗೆ ಚಿಕಿತ್ಸೆ ನೀಡುವ ವ್ಯವಸ್ಥೆ ಸಿದ್ಧಗೊಳಿಸುವಂತೆ ಸೂಚನೆ ನೀಡಲಾಗಿದೆ. ಎಲ್ಲ ಆಸ್ಪತ್ರೆಗಳಲ್ಲಿ ವಿಷ ನಿರೋಧಕ ಹಾಗೂ ಅತ್ಯಗತ್ಯದ ಔಷಧಗಳನ್ನು ದಾಸ್ತಾನು ಇರಿಸಲಾಗಿದೆ. ಮುಖ್ಯವಾಗಿ ನೆರೆ ಪೀಡಿತ ಪ್ರದೇಶಗಳ ಆಸ್ಪತ್ರೆಯಲ್ಲಿ ಈ ಸೌಲಭ್ಯದ ವ್ಯವಸ್ಥೆ ಮಾಡಲಾಗಿದೆ’’ ಎಂದು ಅವರು ಹೇಳಿದ್ದಾರೆ.