ಕೇರಳಕ್ಕಾಗಿ 6,000 ರೂ. ದೇಣಿಗೆ ಸಂಗ್ರಹಿಸಿದ್ದ ಮಹಾತ್ಮಾ ಗಾಂಧೀಜಿ
ತಿರುವನಂತಪುರಂ, ಆ.26: ಸುಮಾರು 100 ವರ್ಷಗಳ ಹಿಂದೆ ಭಾರೀ ಪ್ರವಾಹಕ್ಕೆ ಕೇರಳ ನಲುಗಿದ್ದ ಸಂದರ್ಭ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರು ರಾಜ್ಯಕ್ಕಾಗಿ 6 ಸಾವಿರ ರೂ.ಗಳನ್ನು ಸಂಗ್ರಹಿಸಿ ನೀಡಿದ್ದರು.
ಈ ಬಾರಿ ಸುರಿದ ಭಾರೀ ಮಳೆ, ಪ್ರವಾಹ ಮತ್ತು ಭೂಕುಸಿತದಿಂದ ಕೇರಳದಲ್ಲಿ 290 ಮಂದಿ ಮೃತಪಟ್ಟಿದ್ದಾರೆ. 10 ಲಕ್ಷ ಮಂದಿ ನಿರ್ವಸಿತರಾಗಿದ್ದಾರೆ. 1924ರ ಜುಲೈಯಲ್ಲಿ ಸುರಿದ ಭಾರೀ ಮಳೆ ಮತ್ತು ಪ್ರವಾಹಕ್ಕೆ ನೂರಾರು ಮಂದಿ ಬಲಿಯಾಗಿದ್ದರು ಎನ್ನಲಾಗಿದೆ.
‘ಯಂಗ್ ಇಂಡಿಯಾ’ ಮತ್ತು ‘ನವಜೀವನ್’ ಎಂಬ ತಮ್ಮ ಪ್ರಕಟನೆಗಳ ಮೂಲಕ ಗಾಂಧೀಜಿ ಪ್ರವಾಹ ಪೀಡಿತ ‘ಮಲಬಾರ್ (ಕೇರಳ)ಗೆ ನೆರವಾಗುವಂತೆ ಜನರಲ್ಲಿ ಮನವಿ ಮಾಡಿದ್ದರು. ಗಾಂಧೀಜಿಯವರ ಮನವಿಗೆ ಪ್ರತಿಕ್ರಿಯಿಸಿದ ಮಹಿಳೆಯರು, ಮಕ್ಕಳು ಸೇರಿದಂತೆ ಹಲವರು ಚಿನ್ನಾಭರಣ, ಉಳಿತಾಯದ ಹಣವನ್ನು ನೀಡಿದರು. ಕೆಲವರು ಹಣ ನೀಡುವುದಕ್ಕಾಗಿ ದಿನದ ಒಂದು ಹೊತ್ತಿನ ಊಟವನ್ನೂ ಬಿಟ್ಟಿದ್ದರು. ಪರಿಹಾರ ನಿಧಿಗೆ ಹಣ ನೀಡುವ ಸಲುವಾಗಿ ಬಾಲಕಿಯೊಬ್ಬಳು 3 ಪೈಸೆಯನ್ನು ಕದ್ದಿರುವ ಬಗ್ಗೆಯೂ ಗಾಂಧೀಜಿ ಲೇಖನವೊಂದರಲ್ಲಿ ಬರೆದಿದ್ದರು.