ಅರ್ನಬ್ ಗೋಸ್ವಾಮಿ ವಿರುದ್ಧ ಒಂದಾದ ಮಲಯಾಳಿಗಳು: ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳ ಸುರಿಮಳೆ
ಕೇರಳಿಗರನ್ನು ‘ನಾಚಿಕೆಯಿಲ್ಲದವರು’ ಎಂದ ಆರೋಪ
ಹೊಸದಿಲ್ಲಿ, ಆ.26: ‘ಕೇರಳಿಗರು ನಾಚಿಕೆಯಿಲ್ಲದವರು’ ಎಂದು ಟಿವಿ ಶೋ ವೇಳೆ ಹೇಳಿಕೆ ನೀಡಿದ್ದಾರೆ ಎನ್ನಲಾದ ರಿಪಬ್ಲಿಕ್ ಟಿವಿ ಸಂಪಾದಕ ಅರ್ನಾಬ್ ಗೋಸ್ವಾಮಿ ವಿರುದ್ಧ ಮಲಯಾಳಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದಿದ್ದಾರೆ.
ರಿಪಬ್ಲಿಕ್ ಟಿವಿ ಮತ್ತು ಅರ್ನಬ್ ಗೋಸ್ವಾಮಿಯ ಫೇಸ್ ಬುಕ್ ಮತ್ತು ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿರುವ ಮಲಯಾಳಿಗಳು ತೀವ್ರ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.
ಯುಎಇಯ 700 ಕೋಟಿ ರೂ. ಪರಿಹಾರ ವಿವಾದಕ್ಕೆ ಸಂಬಂಧಿಸಿ ಚಾನೆಲ್ ನಲ್ಲಿ ಚರ್ಚೆ ನಡೆಯುತ್ತಿತ್ತು. ಈ ವಿಚಾರದಲ್ಲಿ ಟೀಕೆ ಮಾಡುತ್ತಿರುವವರು ದೇಶ-ವಿರೋಧಿಗಳು, ನಾಚಿಕೆಯಿಲ್ಲದವರು ಹಾಗು ಪೇಯ್ಡ್ ಏಜೆಂಟ್ ಗಳಾಗಿದ್ದಾರೆ ಎಂದವರು ಹೇಳಿದ್ದರು. ಚರ್ಚೆಯಲ್ಲಿ ಅರ್ನಬ್ ಕೇರಳಿಗರನ್ನು ಅವಹೇಳನ ಮಾಡಿದ ವಿಡಿಯೋ ತುಣುಕು ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸಾವಿರಾರು ಮಲಯಾಳಿಗಳು ಅರ್ನಬ್ ವಿರುದ್ಧ ಟೀಕಾಪ್ರಹಾರ ನಡೆಸಿದರು. ಕೆಲವರು ಅರ್ನಬ್ ರನ್ನು ಬಿಜೆಪಿ ಮತ್ತು ನರೇಂದ್ರ ಮೋದಿಯ ಸಾಕುನಾಯಿ ಎಂದು ಕರೆದರೆ, ಕೆಲವರು ಕೇರಳದ ಬೀದಿಯಲ್ಲಿ ಧೈರ್ಯವಿದ್ದರೆ ನೀವು ನಡೆಯಿರಿ ಎಂದು ಸವಾಲೆಸೆದರು.