ಗೋರಖ್ಪುರ ಮಕ್ಕಳ ಸಾವು ಆಮ್ಲಜನಕ ಕೊರತೆಯಿಂದಲ್ಲ, ಆಂತರಿಕ ರಾಜಕೀಯದಿಂದ ಎಂದ ಆದಿತ್ಯನಾಥ್
ಗೋರಖ್ಪುರ, ಆ.26: ಇಲ್ಲಿನ ಸರಕಾರಿ ಸ್ವಾಮ್ಯದ ಬಾಬಾ ರಾಘವ ದಾಸ ವೈದ್ಯಕೀಯ ಕಾಲೇಜಿನಲ್ಲಿ ಒಂದು ವರ್ಷದ ಹಿಂದೆ ನಡೆದ 60 ನವಜಾತ ಶಿಶುಗಳ ಸಾವಿನ ಕುರಿತು ಶನಿವಾರ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್, ಈ ದುರಂತವು ಆಮ್ಲಜನಕದ ಕೊರತೆಯಿಂದ ನಡೆದಿರಲಿಲ್ಲ. ಬದಲಿಗೆ ಆಸ್ಪತ್ರೆಯ ಆಂತರಿಕ ರಾಜಕೀಯದ ಪರಿಣಾಮವಾಗಿ ಸಂಭವಿಸಿತ್ತು ಎಂದು ತಿಳಿಸಿದ್ದಾರೆ.
ಶನಿವಾರ ಲಖ್ನೋದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಆದಿತ್ಯನಾಥ್, “ಘಟನೆಯ ಮಾಹಿತಿ ಪಡೆದ ಕೂಡಲೆ ನಾನು ಪ್ರಧಾನ ಆರೋಗ್ಯ ನಿರ್ದೇಶಕ, ಆರೋಗ್ಯ ಸಚಿನ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಿಗೆ ಸ್ಥಳಕ್ಕೆ ತೆರಳುವಂತೆ ಸೂಚಿಸಿದೆ ಮತ್ತು ನನಗೆ ಮಾಹಿತಿ ನೀಡುತ್ತಿರುವಂತೆ ತಿಳಿಸಿದೆ. ಮರುದಿನ ನಾನೇ ಖುದ್ದಾಗಿ ಆಸ್ಪತ್ರೆಗೆ ತೆರಳಿ ಪರಿಶೀಲನೆ ನಡೆಸಿದಾಗ ಅಲ್ಲಿ ಆಮ್ಲಜನಕದ ಕೊರತೆಯಿರಲಿಲ್ಲ ಎಂಬುದು ತಿಳಿದುಬಂತು. ಒಂದು ವೇಳೆ ಆಮ್ಲಜನಕದ ಕೊರತೆ ಇದ್ದಿದ್ದರೆ ಮೊದಲಿಗೆ ವೆಂಟಿಲೇಟರ್ನಲ್ಲಿದ್ದ ಮಕ್ಕಳು ಸಾವನ್ನಪ್ಪಬೇಕಿತ್ತು” ಎಂದು ಆದಿತ್ಯನಾಥ್ ತಿಳಿಸಿದ್ದಾರೆ.
2017ರ ಆಗಸ್ಟ್ನಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ನಡೆದ ದುರಂತದಲ್ಲಿ 60 ಮಕ್ಕಳು ಸಾವನ್ನಪ್ಪಿದ್ದರು. ಆಸ್ಪತ್ರೆಯು ಬಿಲ್ ಪಾವತಿಸದ ಕಾರಣ ಆಮ್ಲಜನಕ ಸರಬರಾಜು ಕಡಿತಗೊಳಿಸಿದ್ದೇ ಘಟನೆಗೆ ಕಾರಣ ಎಂದು ಆರೋಪಿಸಲಾಗಿತ್ತು. ಆದರೆ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರಕಾರ ಈ ಆರೋಪವನ್ನು ತಳ್ಳಿಹಾಕಿತ್ತು. ಘಟನೆಗೆ ಸಂಬಂಧಪಟ್ಟಂತೆ ಬಿಆರ್ಡಿ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಮಕ್ಕಳತಜ್ಞ ಡಾ. ಕಫೀಲ್ ಖಾನ್ರನ್ನು ಪೊಲೀಸರು ಬಂಧಿಸಿದ್ದರು. ಸದ್ಯ ಅವರನ್ನು ಬಿಡುಗಡೆಗೊಳಿಸಲಾಗಿದೆ. ಪ್ರಕರಣದ ತನಿಖೆಯನ್ನು ಪೂರ್ಣಗೊಳಿಸಿರುವ ಪೊಲೀಸರು ಮೂವರು ವೈದ್ಯರು ಸೇರಿದಂತೆ ಎಲ್ಲ ಒಂಬತ್ತು ಮಂದಿ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸಿದ್ದಾರೆ.