"ಬ್ರಾಹ್ಮಣರಾಗಿದ್ದರೂ ನೀವೇಕೆ ಆಭರಣ ಧರಿಸುತ್ತಿಲ್ಲ, ಸಿಂಧೂರ ಹಾಕುತ್ತಿಲ್ಲ?’’ ಎಂದು ಪೊಲೀಸರು ಪ್ರಶ್ನಿಸಿದರು
ಹೋರಾಟಗಾರ ವರವರ ರಾವ್ ಪುತ್ರಿ ಪಾವನಾ ಹೇಳಿಕೆ
ಹೈದರಾಬಾದ್, ಆ.30: ‘‘ನಿಮ್ಮ ಪತಿ ದಲಿತರಾಗಿದ್ದಾರೆ, ಹಾಗಿರುವಾಗ ಅವರು ಯಾವುದೇ ಸಂಪ್ರದಾಯ ಪಾಲಿಸುವುದಿಲ್ಲ. ಆದರೆ ನೀವೊಬ್ಬರು ಬ್ರಾಹ್ಮಣರು. ಹಾಗಾದರೆ ನೀವೇಕೆ ಯಾವುದೇ ಆಭರಣ ಅಥವಾ ಸಿಂಧೂರ ಧರಿಸುತ್ತಿಲ್ಲ? ನೀವು ಸಾಂಪ್ರದಾಯಿಕ ರೀತಿಯಲ್ಲಿ ಏಕಿಲ್ಲ? ಪುತ್ರಿಯೂ ತಂದೆಯಂತೆಯೇ ಇರಬೇಕೇನು?’’ ಇಂತಹ ಕೆಲ ಪ್ರಶ್ನೆಗಳನ್ನು ಪೊಲೀಸರು ತನ್ನಲ್ಲಿ ಕೇಳಿದ್ದಾರೆ ಎಂದು ಬಂಧಿತ ಕವಿ ಹಾಗೂ ಹೋರಾಟಗಾರ ವರವರ ರಾವ್ ಅವರ ಪುತ್ರಿ ಕೆ.ಪಾವನಾ ತಿಳಿಸಿದ್ದಾರೆ.
ಪಾವನಾ ಅವರು ಹೈದರಾಬಾದ್ ನಗರದಲ್ಲಿನ ಇಂಗ್ಲಿಷ್ ಆ್ಯಂಡ್ ಫಾರಿನ್ ಲ್ಯಾಂಗ್ವೇಜಸ್ ಯುನಿವರ್ಸಿಟಿ ಇದರ ಸಾಂಸ್ಕೃತಿಕ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ ಕೆ.ಸತ್ಯನಾರಾಯಣ ಅವರ ಪತ್ನಿಯಾಗಿದ್ದಾರೆ. ಸಂಸ್ಥೆಯ ಕ್ಯಾಂಪಸ್ಸಿನಲ್ಲಿರುವ ಅವರ ನಿವಾಸವನ್ನು ಮಂಗಳವಾರ ಶೋಧಿಸುವಾಗ ಪೊಲೀಸರು ಮೇಲಿನ ಪ್ರಶ್ನೆಗಳನ್ನು ಕೇಳಿದ್ದರೆನ್ನಲಾಗಿದೆ.
ತನ್ನ ಮನೆಯಲ್ಲಿ ನಡೆದ ಪೊಲೀಸ್ ಶೋಧ ಕಾರ್ಯಾಚರಣೆ ಮಾನಸಿಕವಾಗಿ ನೋವು ತಂದಿದೆಯಲ್ಲದೆ ಅದೊಂದು ಅವಮಾನಕಾರಿ ಅನುಭವ ಎಂದು ಸತ್ಯನಾರಾಯಣ ಹೇಳಿದ್ದಾರೆ. ಪೊಲೀಸರು ತನಗೆ ಹಾಗೂ ತನ್ನ ಪತ್ನಿಗೆ ಕೋಪ ಭರಿಸುವಂತಹ ಕ್ಷುಲ್ಲಕ ಪ್ರಶ್ನೆಗಳನ್ನು ಕೇಳಿದ್ದಾರೆಂದು ಹೇಳಿದ್ದಾರೆ.
‘‘ಮೊದಲು ಅವರು ನನ್ನ ಮಾವ ವರವರ ರಾವ್ ಅವರನ್ನು ಹುಡುಕುತ್ತಿರುವುದಾಗಿ ಹೇಳಿದರು. ಅವರು ಕಾಣದೇ ಇದ್ದಾಗ, ಪುಸ್ತಕದ ಶೆಲ್ಫ್ ಗಳು, ಕಪಾಟುಗಳು, ಅಟ್ಟ, ಹೀಗೆ ಎಲ್ಲಾ ಜಾಲಾಡಿದ್ದಾರೆ. ಮಾವೋವಾದಿಗಳಿಗೂ ನನಗೂ ನಂಟು ಕಲ್ಪಿಸಲು ಏನಾದರೂ ದೊರೆಯುವುದೇ ಎಂದು ಅವರು ಹುಡುಕಿದ್ದರು. ವರವರ ರಾವ್ ನಮ್ಮ ಮನೆಯಲ್ಲಿ ಏನಾದರೂ ಅಡಗಿಸಿದ್ದಾರಾ ಎಂದೂ ಕೇಳಿದರು ಎಂದು ಸತ್ಯನಾರಾಯಣ ವಿವರಿಸುತ್ತಾರೆ.
‘‘ನಿಮ್ಮ ಮನೆಯಲ್ಲಿ ಇಷ್ಟೊಂದು ಪುಸ್ತಕಗಳೇಕಿವೆ ? ಅವುಗಳನ್ನೆಲ್ಲಾ ಓದುತ್ತೀರಾ ? ಇಷ್ಟೊಂದು ಪುಸ್ತಕಗಳನ್ನು ಏಕೆ ಖರೀದಿಸುತ್ತೀರಿ ? ಏಕೆ ಓದುತ್ತೀರಿ ? ಮಾವೋ, ಮಾರ್ಕ್ಸಿಸ್ಟ್ ಪುಸ್ತಕಗಳನ್ನು ಏಕೆ ಓದುತ್ತೀರಿ. ಚೀನಾದಲ್ಲಿ ಪ್ರಕಟಿತ ಪುಸ್ತಕಗಳೇಕೆ ನಿಮ್ಮ ಬಳಿಯಿವೆ? ನಿಮ್ಮ ಮನೆಯಲ್ಲಿ ಅಂಬೇಡ್ಕರ್ ಮತ್ತು ಫುಳೆ ಅವರ ಫೋಟೋಗಳೇಕಿವೆ? ದೇವರ ಫೋಟೋಗಳೇಕಿಲ್ಲ? ಎಂದು ಪೊಲೀಸರು ಪ್ರಶ್ನಿಸಿದರು. ನೀವು ತುಂಬಾ ಪುಸ್ತಕಗಳನ್ನು ಓದಿ ವಿದ್ಯಾರ್ಥಿಗಳನ್ನು ಹಾಳು ಮಾಡುತ್ತಿದ್ದೀರಿ ಎಂದು ದೂರಿದರು ಎಂದು ಪ್ರೊ ಸತ್ಯನಾರಾಯಣ ಹೇಳುತ್ತಾರೆ.
ಪೊಲೀಸರು ತಮ್ಮ ಕಂಪ್ಯೂಟರ್ ನಲ್ಲಿ ಸ್ಟೋರ್ ಮಾಡಲಾಗಿದ್ದ ತಮ್ಮ 20 ವರ್ಷಗಳ ಸಾಹಿತ್ಯವನ್ನು ಕೊಂಡು ಹೋಗಿದ್ದಾರೆಂದೂ ಅವರು ತಿಳಿಸಿದ್ದಾರೆ. ನನ್ನಲ್ಲಿದ್ದ ಎಲ್ಲಾ ದಾಖಲೆಗಳು, ಹಾರ್ಡ್ ಡಿಸ್ಕ್, ಲ್ಯಾಪ್ಟಾಪ್ ಕೂಡ ಕೊಂಡು ಹೋಗಿದ್ದಾರೆ. ಅವುಗಳಲ್ಲಿ ಸ್ಟೋರ್ ಮಾಡಲಾಗಿರುವಂತಹುಗಳೆಲ್ಲವೂ ಮರಳಿ ದೊರೆಯುವುದೇ ಎಂಬ ಬಗ್ಗೆ ಸಂಶಯವಿದೆ ಎಂದರು.
ಮನೆಯಲ್ಲಿ ಏನನ್ನೋ ಅಡಗಿಸಿಟ್ಟ ಅಪರಾಧಿಯಂತೆ ಅವರು ನನ್ನನ್ನು ಬಿಂಬಿಸಿದರು ಎಂದು ಪ್ರೊ ಸತ್ಯನಾರಾಯಣ ನೋವಿನಿಂದ ನುಡಿಯುತ್ತಾರೆ.