ಸೊಹ್ರಾಬುದ್ದೀನ್ ಎನ್ಕೌಂಟರ್ ತನಿಖೆ ನಡೆಸಿದ ಅಧಿಕಾರಿಯಿಂದ ಸ್ವಯಂ ನಿವೃತ್ತಿ ಅರ್ಜಿ ಸಲ್ಲಿಕೆ
ಅಹ್ಮದಾಬಾದ್, ಆ. 30: ಸೊಹ್ರಾಬುದ್ದೀನ್ ಪ್ರಕರಣದ ತನಿಖೆ ನಡೆಸಿದ, ತನ್ನ ಸಹೋದ್ಯೋಗಿಯಾಗಿದ್ದ ಆಗಿನ ಡಿಐಜಿ ಡಿ.ಜಿ. ವಂಝರಾ ಹಾಗೂ ಇತರರನ್ನು ಬಂಧಿಸಿದ್ದ ಗುಜರಾತ್ ಶ್ರೇಣಿಯ ಐಪಿಎಸ್ ಅಧಿಕಾರಿ ರಜನೀಶ್ ರಾಯ್ ಅವರು ವೈಯುಕ್ತಿಕ ಕಾರಣ ಉಲ್ಲೇಖಿಸಿ ಸ್ವಯಂ ನಿವೃತ್ತಿ ಕೋರಿದ್ದಾರೆ.
ಅಸ್ಸಾಂನಲ್ಲಿ ಸೇನೆಯಿಂದ ನಡೆದಿರುವುದು ನಕಲಿ ಎನ್ಕೌಂಟರ್ ಎಂಬುದನ್ನು ಕೂಡ ಅವರು ಬಹಿರಂಗಗೊಳಿಸಿದ್ದರು. ಪ್ರತಿಕ್ರಿಯೆಗೆ ರಾಯ್ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಅವರು ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಅವಧಿಗಿಂತ ಮುನ್ನ ಸ್ವಯಂ ನಿವೃತ್ತಿಯಾಗಲು ಬಯಸಿದ್ದಾರೆ ಎಂದು ಅವರ ನಿಕಟ ಮೂಲಗಳು ತಿಳಿಸಿವೆ. ಪ್ರಸ್ತುತ ರಾಯ್ ಅವರನ್ನು ಆಂಧ್ರಪ್ರದೇಶದ ಚಿತ್ತೂರ್ನ ಕೇಂದ್ರ ಮೀಸಲು ಪೊಲೀಸ್ ಪಡೆಯ ಉಗ್ರ ನಿಗ್ರಹ ಹಾಗೂ ಭಯೋತ್ಪಾದನೆ ವಿರೋಧಿ (ಸಿಐಎಟಿ) ಶಾಲೆಯಲ್ಲಿ ನಿಯೋಜಿಸಲಾಗಿದೆ. ‘‘ವೈಯಕ್ತಿಕ ಕಾರಣಕ್ಕಾಗಿ ತಾನು ಸ್ವಯಂಪ್ರೇರಿತವಾಗಿ ನಿವೃತ್ತಿ ಪಡೆಯಲು ಬಯಸಿದ್ದೇನೆ’’ ಎಂದು ಆಗಸ್ಟ್ 24ರಂದು ಗೃಹ ಸಚಿವಾಲಯಕ್ಕೆ ಬರೆದೆ ಪತ್ರದಲ್ಲಿ ರಾಯ್ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.