ಕಲ್ಲಿಕೋಟೆ ಜಿಲ್ಲೆಯಲ್ಲಿ ಇಲಿ ಜ್ವರದ ಹಾವಳಿ: 5 ಸಾವು
30 ಮಂದಿಯಲ್ಲಿ ರೋಗ ಪತ್ತೆ
ಕಲ್ಲಿಕೋಟೆ, ಆ.31: ಕಲ್ಲಿಕೋಟೆ ಜಿಲ್ಲೆಯಲ್ಲಿ ಇಲಿಜ್ವರ ಕಂಡುಬಂದಿದ್ದು, ಆಗಸ್ಟ್ 8ರ ನಂತರ ಐದು ಮಂದಿ ಇಲಿಜ್ವರಕ್ಕೆ ಬಲಿಯಾಗಿದ್ದಾರೆ. ಮೂವತ್ತು ಮಂದಿಯಲ್ಲಿ ಇಲಿಜ್ವರವಿರುವುದು ಪತ್ತೆಯಾಗಿದೆ. ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ. ದಿನದಲ್ಲಿ 24 ಗಂಟೆ ಕಂಟ್ರೋಲ್ ರೂಮ್ ಕಾರ್ಯಾಚರಿಸುತ್ತಿದ್ದು, ಸಾಂಕ್ರಾಮಿಕ ರೋಗ ನಿಯಂತ್ರಣಕ್ಕಾಗಿ ಪಂಚಾಯತ್ಗಳಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ತೆರೆಯಲಾಗಿದೆ.
ಮಳೆಗಾಲದ ನಂತರ ಕಲ್ಲಿಕೋಟೆಯಲ್ಲಿ 30 ಮಂದಿಗೆ ಇಲಿಜ್ವರ ಇರುವುದು ಪತ್ತೆಯಾಗಿದ್ದು, ಐವರು ಮೃತಪಟ್ಟಿದ್ದಾರೆ. ಇದೇ ವೇಳೆ ಜಿಲ್ಲೆಯಾದ್ಯಂತ ಇಲಿ ಜ್ವರದ ಲಕ್ಷಣಗಳನ್ನು ಹೊಂದಿರುವ 76 ಮಂದಿ ಚಿಕಿತ್ಸೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ತದನಂತರ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ಹೊರಡಿಸಲಾಗಿತ್ತು. ನಾಳೆ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಎಲ್ಲ ಸರಕಾರಿ ಆಸ್ಪತ್ರೆಗಳಲಿ ಇಲಿಜ್ವರದ ಔಷಧ ಡೊಕ್ಸಿ ಸೈಕಿಲಿನ್ ವಿತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ಸಾಂಕ್ರಾಮಿಕ ರೋಗ ನಿಯಂತ್ರಣದ ಭಾಗವಾಗಿ ಜಿಲ್ಲೆಯಲ್ಲಿ ಸ್ಥಳೀಯಾಡಳಿತಗಳ ನೆರವಿನಲ್ಲಿ ಸಾಂಕ್ರಾಮಿಕ ರೋಗದ ಹಾವಳಿ ಹೆಚ್ಚಿರುವಲ್ಲಿ 16 ತಾತ್ಕಾಲಿಕ ಆಸ್ಪತ್ರೆಗಳನ್ನು ಸ್ಥಾಪಿಸಲಾಗಿದೆ.
ಸಾಂಕ್ರಾಮಿಕ ರೋಗಗಳ ಕುರಿತು ತಿಳಿದು ಬಂದರೆ ಕಂಟ್ರೋಲ್ರೂಮ್ಗೆ ವಿವರ ತಿಳಿಸಬೇಕೆಂದು ಸರಕಾರ ಸೂಚಿಸಿದ್ದು, 0495- 2376100, 0495-2376063 ಕಂಟ್ರೋಲ್ ರೂಮ್ನ ನಂಬರಿಗೆ ಕರೆ ಮಾಡಿ ತಿಳಿಸಬಹುದಾಗಿದೆ.