ಅರುಣಾಚಲ ಪ್ರದೇಶದಲ್ಲಿ ಅಪಾಯಕ್ಕೆ ಸಿಲುಕಿದ್ದ ದ್ವೀಪದಿಂದ 19 ಜನರ ರಕ್ಷಣೆ
ಗುವಾಹಟಿ, ಆ.31: ಅರುಣಾಚಲ ಪ್ರದೇಶದಲ್ಲಿ ತುಂಬಿ ಹರಿಯುತ್ತಿರುವ ಸಿಯಾಂಗ್ ನದಿಯ ಪುಟ್ಟದ್ವೀಪದಲ್ಲಿ ಸಿಕ್ಕಿಹಾಕಿಕೊಂಡಿದ್ದ 19 ಜನರನ್ನು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ಗಳು ಶುಕ್ರವಾರ ತೆರವುಗೊಳಿಸಿವೆ.
ಭಾರೀ ಮಳೆಯಿಂದಾಗಿ ಚೀನಾದ ತ್ಸಾಂಗ್ಪೊ ನದಿಯು ಉಕ್ಕಿ ಹರಿಯುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪೂರ್ವ ಸಿಯಾಂಗ್ ಜಿಲ್ಲಾಡಳಿತವು ಬುಧವಾರ ಎಚ್ಚರಿಕೆಯನ್ನು ಹೊರಡಿಸಿತ್ತು. ತ್ಸಾಂಗ್ಪೊ ಅರುಣಾಚಲ ಪ್ರದೇಶನ್ನು ಪ್ರವೇಶಿಸಿದ ಬಳಿಕ ಅದನ್ನು ಸಿಯಾಂಗ್ ಎಂದು ಕರೆಯಲಾಗುತ್ತಿದ್ದು,ಮುಂದೆ ಎರಡು ಇತರ ನದಿಗಳೊಂದಿಗೆ ಸೇರಿದ ಬಳಿಕ ಬ್ರಹ್ಮಪುತ್ರಾ ಹೆಸರಿನಿಂದ ಕರೆಯಲ್ಪಡುತ್ತಿದೆ.
ಶುಕ್ರವಾರ ನಸುಕಿನ 4:30ಕ್ಕೆ ಆರಂಭಗೊಂಡ ರಕ್ಷಣಾ ಕಾರ್ಯಾಚರಣೆ ಒಂದು ಗಂಟೆಯ ಅವಧಿಯಲ್ಲಿ ಪೂರ್ಣಗೊಂಡಿತ್ತು. ದ್ವೀಪದಲ್ಲಿ ಸಿಕ್ಕಿಕೊಂಡಿದ್ದ ಒಟ್ಟು 19 ಜನರನ್ನು ರಕ್ಷಿಸಲಾಗಿದ್ದು,ನಾಲ್ವರು ಯುವಕರು ಮತ್ತು ಓರ್ವ ಹಿರಿಯ ವ್ಯಕ್ತಿ ತಮ್ಮಿಷ್ಟದಂತೆ ದ್ವೀಪದಲ್ಲಿಯೇ ಉಳಿದುಕೊಂಡಿದ್ದಾರೆ ಎಂದು ಪೂರ್ವ ಸಿಯಾಂಗ್ ಜಿಲ್ಲಾಧಿಕಾರಿ ತಾಮಿಯೊ ತಾಟಕ್ ತಿಳಿಸಿದರು.