ಕೇರಳ ಮುಖ್ಯಮಂತ್ರಿಗಳ ನಿಧಿಗೆ 25 ಲಕ್ಷ ರೂ. ನೀಡಿದ ಕರ್ಣಾಟಕ ಬ್ಯಾಂಕ್
ಮಂಗಳೂರು, ಸೆ.1: ಕೇರಳದಲ್ಲಿ ಮಳೆ ಹಾಗೂ ನೆರೆಯಿಂದ ಪೀಡಿತರಾಗಿರುವ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಕರ್ಣಾಟಕ ಬ್ಯಾಂಕ್ ಕೇರಳ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 25 ಲಕ್ಷ ರೂ. ನೀಡಿದೆ. ಈ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ತಿರುವನಂತಪುರದಲ್ಲಿರುವ ಸೆಕ್ರಟೇರಿಯೆಟ್ನಲ್ಲಿ ಭೇಟಿಯಾದ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್ ಈ ವೇಳೆ ಡಿಮಾಂಡ್ ಡ್ರಾಫ್ಟನ್ನು ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಅವರು, ಕೇರಳದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನಮ್ಮ ಸಹೋದರರಿಗೆ ನೆರವಾಗುವುದು ನಮ್ಮ ಕರ್ತವ್ಯವಾಗಿದೆ. ಪಿಣರಾಯಿ ವಿಜಯನ್ ಅವರ ಸಮರ್ಥ ನಾಯಕತ್ವದಲ್ಲಿ ಕೇರಳದ ಜನತೆ ಮತ್ತೆ ಪುಟಿದೇಳಲು ಮತ್ತು ರಾಜ್ಯದಲ್ಲಿ ಮೂಲಭೂತ ಸೌಕರ್ಯಗಳನ್ನು ಮತ್ತೆ ಯಥಾಸ್ಥಿತಿಗೆ ತರಲು ನೆರು ನೀಡುವುದು ನಮ್ಮೆಲ್ಲರ ಹೊಣೆಯಾಗಿದೆ ಎಂದು ತಿಳಿಸಿದ್ದಾರೆ. ಈ ವೇಳೆ ಮಹಾಬಲೇಶ್ವರ್ ಅವರಿಗೆ ಧನ್ಯವಾದ ಸೂಚಿಸಿದ ಪಿಣರಾಯಿ ವಿಜಯನ್, ಕರ್ಣಾಟಕ ಬ್ಯಾಂಕ್ ನ್ನಷ್ಟು ಎತ್ತರಕ್ಕೆ ಏರಲಿ ಎಂದು ಶುಭ ಹಾರೈಸಿದ್ದಾರೆ.