ಜಮೀನು ವಂಚನೆ ಪ್ರಕರಣ: ರಾಬರ್ಟ್ ವಾದ್ರಾ, ಭುಪಿಂದರ್ ಸಿಂಗ್ ಹೂಡಾ ವಿರುದ್ಧ ಎಫ್ಐಆರ್
ಹೊಸದಿಲ್ಲಿ, ಸೆ.1: 2008ರ ಗುರುಗ್ರಾಮ ಜಮೀನು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ, ಹರ್ಯಾಣದ ಮಾಜಿ ಮುಖ್ಯಮಂತ್ರಿ ಭೂಪಿಂದರ್ ಸಿಂಗ್ ಹೂಡಾ, ಗುರುಗ್ರಾಮದಲ್ಲಿರುವ ಡಿಎಲ್ಎಫ್ ಕಂಪೆನಿ ಹಾಗೂ ಓಂಕಾರೇಶ್ವರ ಪ್ರಾಪರ್ಟಿಸ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ವಾದ್ರಾ ಮತ್ತು ಹೂಡಾ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿಧಿ 120ಬಿ (ಅಪರಾಧಿ ಸಂಚು), 420 (ವಂಚನೆ), 467 (ವೌಲ್ಯಯುತ ಭದ್ರತೆಯ ನಕಲು), 468 (ವಂಚನೆಯ ಉದ್ದೇಶದಿಂದ ದಾಖಲೆ ತಿದ್ದುವುದು) ಮತ್ತು 471 ( ನಕಲಿ ದಾಖಲೆಯನ್ನು ಅಸಲಿ ಎಂದು ಬಿಂಬಿಸುವುದು) ಅಡಿ ದೂರು ದಾಖಲಿಸಲಾಗಿದೆ. ವಾದ್ರಾ ಮಾಲಕತ್ವದ ಸ್ಕೈಲೈಟ್ ಹಾಸ್ಪಿಟಾಲಿಟಿ ಗುರುಗ್ರಾಮದಲ್ಲಿ 7.5 ಕೋಟಿ ರೂ. ಬೆಲೆಗೆ ಜಮೀನನ್ನು ಖರೀದಿಸಿ ಅದರ ನಕಲಿ ದಾಖಲೆಗಳನ್ನು ಸೃಷ್ಟಿಸಿ 55 ಕೋಟಿ ರೂ.ಗೆ ಮಾರಾಟ ಮಾಡಿದೆ ಎಂದು ಆರೋಪಿಸಲಾಗಿದೆ.
Next Story