ರಘುರಾಮ್ ರಾಜನ್ ನೀತಿಗಳನ್ನೇ ಮುಂದುವರಿಸಲು ಆರಂಭಿಸಿದ ಊರ್ಜಿತ್ ಪಟೇಲ್
ಹೊಸದಿಲ್ಲಿ, ಸೆ.3: ಸೆಪ್ಟೆಂಬರ್ 4, 2016ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ 24ನೇ ಗವರ್ನರ್ ಆಗಿ ರಘುರಾಮ್ ರಾಜನ್ ಅವರಿಂದ ಊರ್ಜಿತ್ ಪಟೇಲ್ ಅಧಿಕಾರ ಸ್ವೀಕರಿಸಿದ್ದರು. ನೋಟ್ ಬ್ಯಾನ್ ನಂತರ ಕೇಂದ್ರ ಸರಕಾರ ಮಾತ್ರವಲ್ಲ, ಊರ್ಜಿತ್ ಪಟೇಲ್ ವಿರುದ್ಧವೂ ತೀವ್ರ ಟೀಕೆ ವ್ಯಕ್ತವಾಗಿದ್ದವು.
ರಘುರಾಮ್ ರಾಜನ್ ಅವರಿಗಿಂತ ತೀರಾ ಭಿನ್ನವಾಗಿ ಕಾರ್ಯಾಚರಿಸುತ್ತಿದ್ದ ಊರ್ಜಿತ್ ಪಟೇಲ್, ಹೇಳಿಕೆಗಳನ್ನು ನೀಡುವುದರಿಂದ ದೂರವೇ ಇದ್ದರೂ ಇದೀಗ ಕ್ರಮೇಣವಾಗಿ ರಘುರಾಮ್ ರಾಜನ್ ಅವರು ಅನುಸರಿಸಿದಂತಹದೇ ನೀತಿಗಳನ್ನು ಪಾಲಿಸಲು ಆರಂಭಿಸಿದ್ದು, ಈಗಾಗಲೇ ಬ್ಯಾಂಕುಗಳ ಮೇಲೆ ಕಠಿಣ ನಿಯಂತ್ರಣಗಳನ್ನೂ ಹೇರಿದ್ದಾರೆ.
ರಾಜನ್ ಅವರ ಅವಧಿಯಲ್ಲಿ ಕೈಗೊಳ್ಳಲಾದ ಎರಡು ಕ್ರಮಗಳು, ವಿತ್ತ ನೀತಿ ಸಮಿತಿಯ ಅಧಿಕೃತಗೊಳಿಸುವಿಕೆ ಹಾಗೂ ವ್ಯವಸ್ಥೆಯಿಂದ ಅನುತ್ಪಾದಕ ಸಾಲಗಳನ್ನು ಇಲ್ಲವಾಗಿಸುವ ನಿಟ್ಟಿನಲ್ಲಿ ಕೆಲವೊಂದು ನೀತಿಗಳನ್ನು ಈಗಲೂ ಮುಂದುವರಿಸಿಕೊಂಡು ಹೋಗಲಾಗಿದೆ.
ರಾಜನ್ ಅವರು ಆರಂಭಿಸಿದ್ದ ಅಸೆಟ್ ಕ್ವಾಲಿಟಿ ರಿವೀವ್ ನಿಂದಾಗಿ ಅಭಿವೃದ್ಧಿಗೆ ಹೊಡೆತ ಬೀಳುವುದೆಂದು ಕಾರ್ಪೊರೇಟ್ ವಲಯ ಅಭಿಪ್ರಾಯ ಪಟ್ಟಿದ್ದರೂ ಪಟೇಲ್ ಈ ಕ್ರಮವನ್ನು ಮುಂದುವರಿಸಿದ್ದಾರೆ.
ಕೆಲವೊಂದು ದೊಡ್ಡ ಸುಸ್ತಿದಾರರಿಂದಾಗಿ ಉದ್ಭವಿಸಿರುವ ಸಮಸ್ಯೆ ಪರಿಹಾರಕ್ಕೆ ಇನ್ಸಾಲ್ವೆನ್ಸಿ ಆ್ಯಂಡ್ ಬ್ಯಾಂಕ್ಟ್ರಪ್ಸಿ ಕೋಡ್ ಜಾರಿಗೂ ಅವರು ಮುಂದಾಗಿದ್ದಾರೆ. ಈಗಾಗಲೇ ರಿಸರ್ವ್ ಬ್ಯಾಂಕ್ ಸುಮಾರು 4 ಲಕ್ಷ ಕೋಟಿ ರೂ. ಸಾಲ ಬಾಕಿಯಿರಿಸಿರುವ 40 ಕಾರ್ಪೊರೇಟ್ ಸಂಸ್ಥೆಗಳ ಎರಡು ಪಟ್ಟಿಗಳೊಂದಿಗೆ ಸಿದ್ಧವಾಗಿದೆ. 3 ಲಕ್ಷ ಕೋಟಿ ರೂ. ಸಾಲ ಬಾಕಿಯಿರಿಸಿರುವ 60-70 ಕಾರ್ಪೊರೇಟ್ ಸಂಸ್ಥೆಗಳ ಹೆಸರುಗಳಿರುವ ಮೂರನೇ ಪಟ್ಟಿಯೂ ಸಿದ್ಧಗೊಳ್ಳುತ್ತಿದೆ.