ಜ್ಯೋತಿರಾದಿತ್ಯ ಸಿಂಧಿಯಾರಿಗೆ ಗುಂಡಿಕ್ಕುವುದಾಗಿ ಬೆದರಿಸಿದ ಬಿಜೆಪಿ ಶಾಸಕಿಯ ಪುತ್ರ
ಭೋಪಾಲ್, ಸೆ.3: ಕಾಂಗ್ರೆಸ್ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಗುಂಡಿಕ್ಕುವುದಾಗಿ ಬಿಜೆಪಿ ಶಾಸಕಿ ಉಮಾ ದೇವಿ ಖಾತಿಕ್ ಅವರ ಪುತ್ರ ಪ್ರಿನ್ಸ್ ದೀಪ್ ಲಾಲ್ ಚಂದ್ ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಬೆದರಿಸಿದ್ದಾರೆ.
``ಜ್ಯೋತಿರಾದಿತ್ಯ ಸಿಂಧಿಯಾ, ನಿಮ್ಮ ನರಗಳಲ್ಲಿ ಝಾನ್ಸಿ ರಾಣಿಯನ್ನು ಕೊಂದ ಜೀವಾಜಿ ರಾವ್ ರಕ್ತ ಹರಿಯುತ್ತಿದೆ. ನೀವು ಹಟ್ಟಗೆ ಕಾಲಿಟ್ಟರೆ ನಿಮಗೆ ಗುಂಡಿಕ್ಕುತ್ತೇನೆ. ಒಂದೋ ನೀವು ಸಾಯುತ್ತೀರಿ ಇಲ್ಲವೇ ನಾನು ಸಾಯುತ್ತೇನೆ,'' ಎಂದು ಲಾಲ್ ಚಂದ್ ನ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆಯಲಾಗಿದೆ.
ಸಿಂಧಿಯಾ ಅವರು ಹಟ್ಟ ಜಿಲ್ಲೆಗೆ ಸೆಪ್ಟೆಂಬರ್ 5ರಂದು ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಲು ಬರುವ ಕಾರ್ಯಕ್ರಮವಿದೆ.
ಮಧ್ಯ ಪ್ರದೇಶದ ಹಟ್ಟ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕಿಯಾಗಿರುವ ಉಮಾ ದೇವಿ ತನ್ನ ಮಗ ಒಡ್ಡಿರುವ ಬೆದರಿಕೆಯ ಬಗ್ಗೆ ಪ್ರತಿಕ್ರಿಯಿಸಿ ``ಇದು ದುರಾದೃಷ್ಟಕರ. ಸಿಂಧಿಯಾ ಓರ್ವ ಗೌರವಾನ್ವಿತ ಸಂಸದರು. ಆ ಪೋಸ್ಟ್ ತೆಗೆದು ಹಾಕುವಂತೆ ಮಗನಲ್ಲಿ ಹೇಳುತ್ತೇನೆ'' ಎಂದಿದ್ದಾರೆ.
ಈ ಬೆದರಿಕೆ ಬಗ್ಗೆ ತನಿಖೆ ನಡೆಸಿ ಸಿಂಧಿಯಾರಿಗೆ ನೀಡಲಾಗಿರುವ ಭಧ್ರತೆ ಹೆಚ್ಚಿಸಬೇಕೆಂದು ಮಾಜಿ ಕಾಂಗ್ರೆಸ್ ಸಚಿವ ರಾಜಾ ಪಟೇರಿಯಾ ಆಗ್ರಹಿಸಿದ್ದಾರೆ.