ಕ್ಷಮೆ ಕೋರಲು ‘ರಿಪಬ್ಲಿಕ್ ಟಿವಿ’ಯ ಅರ್ನಾಬ್ ಗೋಸ್ವಾಮಿಗೆ ಎನ್ಬಿಎಸ್ಎ ನೋಟಿಸ್
ಸುದ್ದಿ ಪ್ರಸಾರದಲ್ಲಿ ಅನುಚಿತ ಪದ ಬಳಕೆ
ಹೊಸದಿಲ್ಲಿ, ಸೆ. 4: ಸುದ್ದಿ ವಾಹಿನಿ ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಮಾಡಿದ ಅಸಮಂಜಸ ಟೀಕೆಗೆ ವೀಕ್ಷಕರಿಂದ ‘ಫುಲ್ ಸ್ಕ್ಕ್ರಿನ್’ ಕ್ಷಮೆ ಕೋರಬೇಕು ಎಂದು ನ್ಯೂಸ್ ಬ್ರಾಡ್ಕಾಸ್ಟಿಂಗ್ ಅಸೋಸಿಯೇಶನ್ ಸ್ಥಾಪಿಸಿದ ಸ್ವತಂತ್ರ ಸಂಸ್ಥೆ ನ್ಯೂಸ್ ಬ್ರಾಡ್ಕಾಸ್ಟಿಂಗ್ ಸ್ಟಾಂಡರ್ಡ್ ಅಥಾರಿಟಿ (ಎನ್ಬಿಎಸ್ಎ) ಆಗಸ್ಟ್ 30ರಂದು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ಗೆ ನಿರ್ದೇಶಿಸಿದೆ.
ವಡ್ಗಾಂವ್ ಶಾಸಕ ಜಿಗ್ನೇಶ್ ಮೇವಾನಿ ರ್ಯಾಲಿ ವರದಿ ಮಾಡಲು ಹೋದ ತನ್ನ ವರದಿಗಾರ್ತಿ ಶಿವಾನಿ ಗುಪ್ತಾ ಅವರಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ದೃಶ್ಯ ಪ್ರದರ್ಶಿಸಿದ ಬಳಿಕ ಎ. ಸಿಂಗ್ ಹಾಗೂ ಅವರ ಆಪ್ತ ಪ್ರತಿಷ್ಠಾ ಸಿಂಗ್ ಎನ್ಬಿಎಸ್ಎಗೆ ದೂರು ಸಲ್ಲಿಸಿದ್ದರು. ಜಿಗ್ನೇಶ್ ಮೇವಾನಿ ಕಾರ್ಯಕ್ರಮದಲ್ಲಿ ಬೆಂಬಲಿಗರ ಕೊರತೆ ಕುರಿತು ವರದಿ ಮಾಡುತ್ತಿರುವಾಗ ಸಣ್ಣ ಗುಂಪೊಂದು ವರದಿಗಾರ್ತಿ ಶಿವಾನಿ ಗುಪ್ತಾ ಅವರನ್ನು ಸುತ್ತುವರಿದಿರುವುದು, ಅನಂತರ ಪೊಲೀಸರು ಗುಪ್ತಾ ಅವರನ್ನು ರಕ್ಷಿಸಿ ಕರೆದೊಯ್ಯುತ್ತಿರುವ ವೀಡಿಯೋವನ್ನು ಸುದ್ದಿಯೊಂದಿಗೆ ರಿಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಜಿಗ್ನೇಶ್ ಮೇವಾನಿ ಕಾರ್ಯಕ್ರಮದ ಸಂದರ್ಭದ ಈ ಪುಟ್ಟ ವೀಡಿಯೊ ಪ್ರದರ್ಶಿಸುವುದರೊಂದಿಗೆ ಚರ್ಚೆ ಆರಂಭಿಸಿದ ಅರ್ನಬ್ ಗೋಸ್ವಾಮಿ ಅಗೌರವಯುತವಾಗಿ ಮಾತನಾಡಿದ್ದರು.
ಒಂದು ಗಂಟೆಗಳ ಕಾಲ ನಡೆದ ಚರ್ಚೆಯಲ್ಲಿ ಗೋಸ್ವಾಮಿ ಹಲವು ಅನುಚಿತ ಪದಗಳನ್ನು ಬಳಸಿದ್ದರು. ಇದನ್ನು ಪ್ರಶ್ನಿಸಿ ಟಿವಿಗೆ ಇಮೇಲ್ ಸಂದೇಶ ಕಳುಹಿಸಲಾಗಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ರಿಪಬ್ಲಿಕ್ ಟಿವಿ, ತನ್ನ ವರದಿಗಾರ್ತಿ ವರದಿ ಮಾಡುತ್ತಿರುವಾಗ ಸಿಂಗ್ (ದೂರುದಾರರಲ್ಲಿ ಒಬ್ಬರು) ಸೇರಿದಂತೆ ಹಲವರು ಮಧ್ಯೆ ಪ್ರವೇಶಿಸಿದ್ದಾರೆ ಎಂದು ಹೇಳಿತ್ತು. ಬಳಿಕ ಈ ಚರ್ಚೆಯ ವೀಡಿಯೊವನ್ನು ವೆಬ್ಸೈಟ್ ಹಾಗೂ ಯುಟ್ಯೂಬ್ನಿಂದ ತೆಗೆದು ಹಾಕಿತ್ತು.
ಈ ಬಗ್ಗೆ ಪರಿಶೀಲನೆ ನಡೆಸಿದ ಎನ್ಬಿಎಸ್ಎ ರಿಪಬ್ಲಿಕ್ ಟಿವಿ ಪ್ರಸಾರ ಮಾಡಿದ ಸುದ್ದಿಯಲ್ಲಿ ಯಾವುದೇ ಆಕ್ಷೇಪಾರ್ಹ ಪದಗಳನ್ನು ಬಳಸಿಲ್ಲ. ಕ್ಷುದ್ರ ಹಾಗೂ ಬೆದರಿಕೆ ಎಂದು ಹೇಳಬಹುದಾದ ಶೈಲಿ ಇಲ್ಲ ಎಂದು ಆಗಸ್ಟ್ 30ರ ತನ್ನ ಆದೇಶದಲ್ಲಿ ಹೇಳಿದೆ.
ಆದರೆ, ಅರ್ನಾಬ್ ಗೋಸ್ವಾಮಿ ಅವರ ಭಾಷೆಯ ಆಯ್ಕೆಯನ್ನು ಖಂಡಿಸಿರುವ ಎನ್ಬಿಎಸ್ಎ, ಅರ್ನಾಬ್ ಅವರ ನಿರ್ವಹಣೆ ಅಸಮರ್ಥನೀಯ. ಅಲ್ಲದೆ ಪ್ರಸಾರ ಗುಣಮಟ್ಟವನ್ನು ಉಲ್ಲಂಘಿಸಿದೆ ಎಂದಿದೆ.
2018 ಸೆಪ್ಟಂಬರ್ 9 ಗಂಟೆಗೆ ಚರ್ಚೆ ಆರಂಭವಾಗುವುದಕ್ಕಿಂತ ಮುನ್ನ ಸ್ಪಷ್ಟನೆ ನೀಡಬೇಕು ಎಂದು ಎನ್ಬಿಎಸ್ಎ ರಿಪಬ್ಲಿಕ್ ಟಿವಿಗೆ ನಿರ್ದೇಶಿಸಿದೆ.