ಕೈಲಾಸ ಮಾನಸಸರೋವರ ಯಾತ್ರೆ ಆರಂಭಿಸುವ ಮೊದಲು ರಾಹುಲ್ ನಾನ್-ವೆಜ್ ಆಹಾರ ಸೇವಿಸಿದ್ದರೇ ?
ಇಲ್ಲಿದೆ ವಾಸ್ತವಾಂಶ
ಹೊಸದಿಲ್ಲಿ, ಸೆ. 5: ತಮ್ಮ ಕೈಲಾಸ ಮಾನಸಸರೋವರ ಯಾತ್ರೆ ಆರಂಭಿಸುವ ಮುನ್ನ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ನಾನ್-ವೆಜ್ ಆಹಾರ ಸೇವಿಸಿದ್ದಾರೆಂದು ಕೆಲ ನೇಪಾಳಿ ವೆಬ್ಸೈಟ್ ಗಳು ವರದಿ ಮಾಡಿದ ನಂತರ ಕಾಠ್ಮಂಡುವಿನ ವೂಟೂ ರೆಸ್ಟಾರೆಂಟ್ ಮಂಗಳವಾರ ಹೇಳಿಕೆ ನೀಡಿ ರಾಹುಲ್ ಅವರು ಸಂಪೂರ್ಣ ಸಸ್ಯಾಹಾರಿ ತಿನಿಸುಗಳನ್ನು ಮಾತ್ರ ಸೇವಿಸಿದ್ದಾರೆಂದು ಸ್ಪಷ್ಟ ಪಡಿಸಿದೆ.
''ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ವೂಟೂಗೆ ಭೇಟಿ ನೀಡಿದ ಸಂದರ್ಭ ಆರ್ಡರ್ ಮಾಡಿದ ಆಹಾರದ ಬಗ್ಗೆ ಸಾಕಷ್ಟು ಊಹಾಪೋಹಗಳಿವೆ. ಅವರು ಪ್ಯೂರ್-ವೆಜ್ ಆಹಾರವನ್ನಷ್ಟೇ ಆರ್ಡರ್ ಮಾಡಿದ್ದರು. ನಮ್ಮ ಸಂಸ್ಥೆ ಯಾವುದೇ ಮಾಧ್ಯಮ ಸಂಸ್ಥಗೆ ರಾಹುಲ್ ಆರ್ಡರ್ ಮಾಡಿದ್ದ ಆಹಾರದ ಬಗ್ಗೆ ಮಾಹಿತಿ ನೀಡಿಲ್ಲ'' ಎಂದು ರೆಸ್ಟಾರೆಂಟ್ ತನ್ನ ಫೇಸ್ ಬುಕ್ ಪುಟದಲ್ಲಿ ಹೇಳಿಕೊಂಡಿದೆ.
ಇದಕ್ಕೂ ಮುನ್ನ ಬಿಜೆಪಿಯ ಐಟಿ ಘಟಕದ ಉಸ್ತುವಾರಿ ಅಮಿತ್ ಮಾಲವಿಯಾ ಹಿಂದಿ ವೆಬ್ ತಾಣದ ವರದಿಯೊಂದನ್ನು ಉಲ್ಲೇಖಿಸಿ ಕಾಂಗ್ರೆಸ್ ಅಧ್ಯಕ್ಷರು ಕಾಠ್ಮಂಡುವಿನ ವೂಟೂ ರೆಸ್ಟಾರೆಂಟಿನಲ್ಲಿ ನಾನ್-ವೆಜ್ ಆಹಾರ ಸೇವಿಸಿದ್ದರೆಂದು ಹೇಳಿದ್ದರು. ತಮ್ಮ ಟ್ವೀಟ್ ನಲ್ಲಿ ಅವರು ರೆಸ್ಟಾರೆಂಟ್ ವೈಟರ್ ಹಾಗೆ ಹೇಳಿದ್ದರೆಂದು ಹಾಗೂ ಕಾಂಗ್ರೆಸ್ ಮತ್ತದರ ನಾಯಕರಿಗೆ ಹಿಂದೂಗಳ ಭಾವನೆ ಘಾಸಿಗೊಳಿಸುವುದು ಅಭ್ಯಾಸವಾಗಿ ಬಿಟ್ಟಿದೆ ಎಂದಿದ್ದರು.
ರಾಹುಲ್ ಅವರು ಕೈಲಾಸ ಮಾನಸಸರೋವರ ಯಾತ್ರೆಗೆ ಆಗಸ್ಟ್ 31ರಂದು ತೆರಳಿದ್ದಾರೆ.