ಆಧಾರ್ ಇಲ್ಲದಿದ್ದರೆ ಶಾಲೆ ಪ್ರವೇಶ ನಿರಾಕರಿಸುವಂತಿಲ್ಲ: ಯುಐಡಿಎಐ
ಹೊಸದಿಲ್ಲಿ, ಸೆ. 5: ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ಶಾಲೆಗಳು ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುವಂತಿಲ್ಲ ಎಂದು ಹೇಳಿರುವ ಭಾರತದ ಅನನ್ಯ ಗುರುತಿನ ಪ್ರಾಧಿಕಾರ, ಆಧಾರ್ ಕಾರ್ಡ್ ಇಲ್ಲದ ಕಾರಣಕ್ಕೆ ಪ್ರವೇಶ ನಿರಾಕರಣೆ ಸಿಂಧುವಲ್ಲ ಎಂದಿದೆ. ಆಧಾರ್ ನೋಂದಣಿ ಹಾಗೂ ಪರಿಷ್ಕರಣೆಗೆ ಶಾಲೆಗಳು ಸ್ಥಳೀಯ ಬ್ಯಾಂಕ್, ಅಂಚೆ ಕಚೇರಿ, ರಾಜ್ಯ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾಡಳಿತದೊಂದಿಗೆ ಹೊಂದಾಣಿಕೆ ಮಾಡಿಕೊಂಡು ತಮ್ಮ ಕ್ಯಾಂಪಸ್ನಲ್ಲಿ ವಿಶೇಷ ಶಿಬಿರಗಳನ್ನು ನಡೆಸಲು ಇದು ಉತ್ತೇಜಿಸಬೇಕು ಎಂದು ಅದು ಹೇಳಿದೆ.
ರಾಜ್ಯಗಳ ಮುಖ್ಯ ಕಾರ್ಯದರ್ಶಿಯವರಿಗೆ ರವಾನಿಸಲಾದ ಅಧಿಕೃತ ಸುತ್ತೋಲೆಯಲ್ಲಿ ಯುಐಡಿಎಐ, ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ಕೆಲವು ಶಾಲೆಗಳು ವಿದ್ಯಾರ್ಥಿಗಳಿಗೆ ಪ್ರವೇಶ ನಿರಾಕರಿಸುವುದು ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದೆ. ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ಯಾವುದೇ ಮಕ್ಕಳು ಅವರ ಸೌಲಭ್ಯ ಅಥವಾ ಹಕ್ಕುಗಳಿಂದ ವಂಚಿತರಾಗಬಾರದು ಹಾಗೂ ಹಕ್ಕು, ಸೌಭ್ಯವನ್ನು ನಿರಾಕರಿಸ ಕೂಡದು ಎಂದು ಸುತ್ತೋಲೆ ಹೇಳಿದೆ. ಇಂತಹ ನಿರಾಕರಣೆ ‘ಅಸಿಂಧು ಹಾಗೂ ಇದಕ್ಕೆ ಕಾನೂನು ಅಡಿಯಲ್ಲಿ ಅವಕಾಶ ಇಲ್ಲ. ಆಧಾರ್ ಕಾರ್ಡ್ ಇಲ್ಲ ಎನ್ನುವ ಕಾರಣಕ್ಕೆ ಯಾವುದೇ ಮಕ್ಕಳಿಗೆ ಪ್ರವೇಶ ಅಥವಾ ಇತರ ಸೌಲಭ್ಯಗಳನ್ನು ನಿರಾಕರಿಸುವಂತಿಲ್ಲ’ ಎಂದು ಯುಐಡಿಎಐ ಹೇಳಿದೆ. ಆಧಾರ್ ಸಂಖ್ಯೆ ಇಲ್ಲದೆ ಶಾಲೆ ಪ್ರವೇಶ ಪಡೆಯಲು ತೊಂದರೆ ಎದುರಿಸುತ್ತಿರುವ ವಿದ್ಯಾರ್ಥಿಗಳು ಹಾಗೂ ಅವರ ಹೆತ್ತವರು ಯುಐಡಿಐಯ ಈ ನಡೆಯಿಂದ ನಿಟ್ಟುಸಿರುಬಿಡುವಂತಾಗಿದೆ.