ಬಿಜೆಪಿ ಶಾಸಕನ ನಾಲಗೆ ಕತ್ತರಿಸಿದರೆ 5 ಲಕ್ಷ ರೂ.: ಕಾಂಗ್ರೆಸ್ ನಾಯಕನ ವಿವಾದಾತ್ಮಕ ಹೇಳಿಕೆ
ಬಿಜೆಪಿ ಶಾಸಕ ರಾಮ್ ಕದಮ್
ನಾಗರಪುರ, ಸೆ. 7: ‘ಒಬ್ಬ ಯುವಕ ಇಷ್ಟಪಟ್ಟ ಯುವತಿಯನ್ನು ಅಪಹರಿಸುತ್ತೇನೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ಶಾಸಕ ರಾಮ್ ಕದಮ್ ಅವರ ನಾಲಗೆಯನ್ನು ಯಾರಾದರೂ ಕತ್ತರಿಸಿದರೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಮಹಾರಾಷ್ಟ್ರದ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಸುಬೋಧ್ ಸಾವೋಜಿ ಹೇಳಿದ್ದಾರೆ.
ಶಾಸಕನಾಗಿ ಕದಮ್ ಅವರು ಈ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಹಾಯಕ ಸಚಿವ ಸುಬೋಧ್ ಸಾವೋಜಿ ಪೂರ್ವ ಮಹಾರಾಷ್ಟ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೀಡಿರುವ ಹೇಳಿಕೆ ವೀಡಿಯೊದಲ್ಲಿ ದಾಖಲಾಗಿದೆ. ಕದಮ್ ಅವರ ನಾಲಗೆ ಕತ್ತರಿಸಲು ಯಾರಾದರೂ ಮುಂದೆ ಬಂದರೆ, ಅವರಿಗೆ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದು ಅವರು ಹೇಳಿರುವುದು ವೀಡಿಯೊದಲ್ಲಿ ಇದೆ.
ಈ ಬಗ್ಗೆ ಸುಬೋಧ್ ಸಾವೋಜಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನೀವು ಒರ್ವ ಯುವತಿಯನ್ನು ಇಷ್ಟಪಟ್ಟು ವಿವಾಹದ ಪ್ರಸ್ತಾಪ ಮಂದಿಟ್ಟರೂ ಆಕೆ ತಿರಸ್ಕರಿಸಿದರೆ, ತನ್ನಲ್ಲಿ ಹೇಳಿ, ತಾನು ಆಕೆಯನ್ನು ಅಪಹರಿಸುತ್ತೇನೆ ಎಂದು ರಾಮ್ ಕದಮ್ ಮುಂಬೈಯ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಮೊಸರು ಕುಡಿಕೆ ಕಾರ್ಯಕ್ರಮದಲ್ಲಿ ಹೇಳಿದ್ದರು. ಈ ಹೇಳಿಕೆ ಹಿನ್ನೆಲೆಯಲ್ಲಿ ಮಹಾರಾಷ್ಟ್ರ ಮಹಿಳಾ ಆಯೋಗ ರಾಮ್ ಕದಮ್ಗೆ ನೋಟಿಸು ಜಾರಿ ಮಾಡಿದೆ ಹಾಗೂ ಪ್ರತಿಕ್ರಿಯೆ ನೀಡುವಂತೆ ನಿರ್ದೇಶಿಸಿದೆ.