ಕಾಶ್ಮೀರ: ಹಿಮಕಣಿವೆಗೆ ಬಿದ್ದು ಇಬ್ಬರು ಚಾರಣಿಗರು ಮೃತ
ಶ್ರೀನಗರ, ಸೆ.8: ಹಿಮನದಿಯ ಕಣಿವೆಯೊಳಗೆ ಜಾರಿ ಬಿದ್ದು ಇಬ್ಬರು ಚಾರಣಿಗರು ಮೃತಪಟ್ಟಿದ್ದು, ಇನ್ನೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಜಮ್ಮು-ಕಾಶ್ಮೀರದ ಕೊಲಾಹೊಯ್ ಹಿಮನದಿಯ ಬಳಿ ನಡೆದಿದೆ.
ಘಟನೆ ನಡೆದಿರುವ ಸ್ಥಳಕ್ಕೆ ರಕ್ಷಣಾ ಕಾರ್ಯಾಚರಣೆ ತಂಡವನ್ನು ಕಳುಹಿಸಿಕೊಡಲಾಗಿದ್ದು ರಾಜ್ಯ ಸರಕಾರವು ವಾಯುಪಡೆ ಹಾಗೂ ಭಾರತೀಯ ಸೇನೆಯ ಸಹಾಯವನ್ನು ಕೋರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊಲಾಹಾಯ್ ಹಿಮನದಿಯಿಂದ ವಾಪಸಾಗುತ್ತಿದ್ದ ಸುಮಾರು 10 ಮಂದಿ ಚಾರಣಿಗರ ಪೈಕಿ ಮೂವರು ಆಯತಪ್ಪಿ ಹಿಮ ಹೆಪ್ಪುಗಟ್ಟಿದ್ದ ನದಿಯ ಕಣಿವೆಯೊಳಗೆ ಬಿದ್ದಿದ್ದಾರೆ. ಅವರಲ್ಲಿ ಒಬ್ಬರನ್ನು ಉಳಿಸಲು ಸಾಧ್ಯವಾಗಿದೆ. ಘಟನೆಯಲ್ಲಿ ಮೃತಪಟ್ಟವರನ್ನು ಜಮ್ಮು-ಕಾಶ್ಮೀರದ ಅಬಕಾರಿ ಹಾಗೂ ತೆರಿಗೆ ಇಲಾಖೆಯ ಅಧಿಕಾರಿ ನವೀದ್ ಜೀಲಾನಿ ಹಾಗೂ ಅಲ್ಪೈನ್ ಗ್ರೂಪ್ ಎಂಬ ಪ್ರವಾಸ ತಂಡದಲ್ಲಿ ಕೆಲಸ ಮಾಡುತ್ತಿದ್ದ ಆದಿಲ್ ಶಾ ಎಂದು ಗುರುತಿಸಲಾಗಿದೆ.
5 ಕಿ.ಮೀ.ಉದ್ದಕ್ಕೆ ಹರಿಯುವ ಕೊಲಾಹಾಯ್ ಹಿಮನದಿ ಕಾಶ್ಮೀರದ ನದಿಗಳಿಗೆ ನೀರನ್ನು ಒದಗಿಸುತ್ತದೆ. ಇದು ಚಾರಣಿಗರ ಪಾಲಿಗೆ ಅಚ್ಚುಮೆಚ್ಚಿನ ತಾಣವಾಗಿದೆ.